
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಇದರ ನಡುವೆ ಭಾರತ ಗಡಿ ಪ್ರವೇಶಕ್ಕೆ ಯತ್ನಿಸಿದ ಪಾಕಿಸ್ತಾನ ಮೂಲದ 7 ಉಗ್ರರನ್ನು ಗಡಿ ಭದ್ರತಾ ಪಡೆ (BSF) ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಅಂತರರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರ ಬಹುದೊಡ್ಡ ಒಳನುಸುಳುವಿಕೆ ಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿದೆ.
ಮೂಲಗಳ ಪ್ರಕಾರ ಮೇ 8ರ ರಾತ್ರಿ 11 ಗಂಟೆ ಸುಮಾರಿಗೆ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿದೆ ಎಂದು ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.
7 ಉಗ್ರರು ಹತ, ಪಾಕ್ ರೇಂಜರ್ಸ್ ನೆರವು
ಈ ಕಾರ್ಯಾಚರಣೆಯಲ್ಲಿ ಕನಿಷ್ಠ 7 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಈ ಉಗ್ರರಿಗೆ ಪಾಕಿಸ್ತಾನ ಸೇನೆಯ ರೇಂಜರ್ಸ್ ಗಡಿ ನುಸುಳಲು ನೆರವು ನೀಡಿದ್ದರು ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಬಿಎಸ್ಎಫ್ ಯೋಧರು ಕಾರ್ಯಾಚರಣೆಗಿಳಿದಿದ್ದು, ಉಗ್ರರು ಮತ್ತು ಪಾಕ್ ರೇಂಜರ್ಸ್ ರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಪಾಕ್ ರೇಂಜರ್ಸ್ ಕೂಡ ಪ್ರತಿದಾಳಿ ನಡೆಸಿದ್ದಾರೆ. ಆದರೆ ಸೈನಿಕರ ಗುಂಡೇಟಿಗೆ ಉಗ್ರರು ಸಾವನ್ನಪ್ಪಿದ್ದು, ಅವರಿಗೆ ನೆರವು ನೀಡಿದ ಪಾಕ್ ರೇಂಜರ್ಸ್ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಧಂಧರ್ ಪೋಸ್ಟ್ ನಲ್ಲಿದ್ದ ಪಾಕ್ ರೇಂಜರ್ಸ್
ಇನ್ನು ಭಾರತದ ಗಡಿಯೊಳಗೆ ನುಸುಳುತ್ತಿದ್ದ ಉಗ್ರರಿಗೆ ಅಲ್ಲಿಯೇ ಸಮೀಪದ ಧಂಧರ್ ಪೋಸ್ಟ್ ನಲ್ಲಿದ್ದ ಪಾಕ್ ರೇಂಜರ್ಸ್ ನೆರವು ನೀಡುತ್ತಿದ್ದರು. ಇತ್ತ ಉಗ್ರರ ಹೆಡೆಮುರಿಕಟ್ಟಿದ ಸೇನೆ ಬಳಿಕ ಧಂಧರ್ ಪೋಸ್ಟ್ ನಲ್ಲಿದ್ದ ಪಾಕ್ ರೇಂಜರ್ಸ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಪ್ರದೇಶದಲ್ಲಿ ಬಿಎಸ್ಎಫ್ ಭಾರಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ. ಗುರುವಾರ ರಾತ್ರಿ ಜಮ್ಮು, ಪಠಾಣ್ಕೋಟ್, ಉಧಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ನಡೆಸಿದ ಯತ್ನವನ್ನು ಭಾರತ ಕ್ಷಿಪಣಿಗಳು ಮತ್ತು ಡ್ರೋನ್ಗಳ ಭಾರತೀಯ ಸೇನೆ ತಡೆಹಿಡಿದಿದೆ. ಈ ಎಲ್ಲ ಪ್ರದೇಶಗಳನ್ನು ಬ್ಲಾಕ್ಔಟ್ ಮಾಡಿ ಭಾರತವೂ ಪ್ರತಿ ದಾಳಿ ನಡೆಸಿದೆ.
Advertisement