
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಹೆಚ್ಚಾಗಿರುವಂತೆಯೇ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಭಯೋತ್ಪಾದನೆಗೆ "ಶೂನ್ಯ ಸಹಿಷ್ಣುತೆ" ಇರಬೇಕು ಎಂದು ತಿಳಿಸಿದ್ದಾರೆ.
ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಉದ್ವಿಗ್ನತೆ ಕಡಿಮೆ ಮಾಡುವ ಭಾರತದ ಕಾರ್ಯತಂತ್ರ ಪಾಲುದಾರರ ಪ್ರಯತ್ನಗಳ ಹಿನ್ನೆಲೆಯಲ್ಲಿ ಜೈಶಂಕರ್- ಲ್ಯಾಮಿ ನಡುವೆ ಮಾತುಕತೆ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಸ್. ಜೈಶಂಕರ್, ಭಯೋತ್ಪಾದನೆ ಎದುರಿಸುವುದರ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿತ್ತು. ಅದಕ್ಕಾಗಿ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಹೇಳಿದ್ದಾರೆ.
ಜೈಶಂಕರ್ ಅವರು ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಮತ್ತು EU ವಿದೇಶಾಂಗ ವ್ಯವಹಾರಗಳ ಉನ್ನತ ಪ್ರತಿನಿಧಿ ಕಾಜಾ ಕಲ್ಲಾಸ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.
ಬುಧವಾರ ಭಾರತದ ಆಪರೇಷನ್ ಸಿಂಧೂರ್ ಮತ್ತು 15 ಭಾರತೀಯ ನಗರಗಳ ಮೇಲೆ ದಾಳಿ ಮಾಡುವ ಪಾಕ್ ಪ್ರಯತ್ನ ವಿಫಲತೆ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸದ್ಯದ ಉದ್ವಿಗ್ನತೆಗಳು ಗಂಭೀರ ಕಳವಳಕಾರಿಯಾಗಿದೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಬುಧವಾರ ಹೇಳಿದ್ದರು.
ಭಾರತ ಮತ್ತು ಪಾಕಿಸ್ತಾನವನ್ನು ಸಂಯಮ ತೋರಿಸಲು ಮತ್ತು ತ್ವರಿತ, ರಾಜತಾಂತ್ರಿಕ ಮಾರ್ಗ ಕಂಡುಕೊಳ್ಳಲು ನೇರ ಮಾತುಕತೆಯಲ್ಲಿ ತೊಡಗುವಂತೆ ಬ್ರಿಟನ್ ಸರ್ಕಾರ ಒತ್ತಾಯಿಸುತ್ತದೆ ಎಂದು ಹೇಳಿದ್ದರು.
ಕಳೆದ ತಿಂಗಳು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಖಂಡನೆ ವಿಚಾರದಲ್ಲಿ ಯುಕೆ ಸ್ಪಷ್ಟವಾಗಿದೆ. ಪ್ರಾದೇಶಿಕ ಸ್ಥಿರತೆಯನ್ನು ಪುನಃಸ್ಥಾಪಿಸಲು ಮತ್ತು ನಾಗರಿಕರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಕಡೆ ತುರ್ತಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದ್ದರು.
Advertisement