
ನವದೆಹಲಿ: ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ಭುಗಿಲೆದ್ದಿರುವಂತೆಯೇ ಇತ್ತ ಸುದ್ದಿವಾಹಿನಿಗಳು ಮತ್ತು ಕೆಲ ಯೂಟ್ಯೂಬ್ ಚಾನೆಲ್ ಗಳ ತಮ್ಮ ಕಾರ್ಯಕ್ರಮಗಳಲ್ಲಿ ಸೈರನ್ ಶಬ್ದವನ್ನು ಬಹಳಕೆ ಮಾಡುತ್ತಿದ್ದು ಇದೀಗ ಇದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹೇರಿದೆ.
ಸಮುದಾಯ ಜಾಗೃತಿ ಅಭಿಯಾನ ಹೊರತುಪಡಿಸಿ ಇನ್ನಿತರ ಕಾರ್ಯಕ್ರಮಗಳಲ್ಲಿ ವಾಯು ದಾಳಿ ಸೇರಿದಂತೆ ತುರ್ತು ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ಬಳಸುವ ಸೈರನ್ಗಳನ್ನು ಟಿವಿ ಕಾರ್ಯಕ್ರಮಗಳಲ್ಲಿ ಬಳಸಬಾರದು ಎಂದು ಕೇಂದ್ರ ಸರ್ಕಾರ ಎಲ್ಲಾ ಟಿ.ವಿ ಚಾನೆಲ್ಗಳಿಗೆ ಶನಿವಾರ ನಿರ್ದೇಶನ ನೀಡಿದೆ.
1968ರ ನಾಗರಿಕಾ ರಕ್ಷಣಾ ಕಾಯ್ದೆಯಡಿ ಇರುವ ಅಧಿಕಾರ ಬಳಸಿ ಅಗ್ನಿ ಶಾಮಕ ಸೇವೆ, ನಾಗರಿಕ ರಕ್ಷಣೆ ಹಾಗೂ ಗೃಹ ರಕ್ಷಕ ದಳದ ಮಹಾನಿರ್ದೆಶಕರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಸೈರನ್ಗಳ ನಿಯಮಿತ ಬಳಕೆಯು ವಾಯುದಾಳಿ ಸೈರನ್ಗಳ ಬಗ್ಗೆ ನಾಗರಿಕರ ಸೂಕ್ಷ್ಮತೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ದಾಳಿ ನಡೆದಾಗ ಸೈರನ್ ಮೊಳಗಿಸಿದರೆ ಮಾಧ್ಯಮಗಳಲ್ಲಿ ಬರುವ ಶಬ್ದ ಎಂದು ನಾಗರಿಕರು ಅಂದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ವಾಸ್ತಾವಾಂಶ ಪ್ರಕಟಿಸಿ: ಅಶ್ವಿನಿ ವೈಷ್ಣವ್ ಮನವಿ
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಶುಕ್ರವಾರ ಭೇಟಿಯಾಗಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಭಾರತ ಹಾಗೂ ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಸಂದರ್ಭದಲ್ಲಿ ವಾಸ್ತವ ವರದಿಗಳನ್ನು ಪ್ರಕಟಿಸುವಂತೆ ಮನವಿ ಮಾಡಿದ್ದರು. ಇದೇ ವೇಳೆ ಅವರು, ಜವಾಬ್ದಾರಿಯುತ ವರದಿಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿದ್ದರು.
ಮುದ್ರಣ ಮಾಧ್ಯಮಗಳ ಸಂಪಾದಕರೊಂದಿಗೆ ಸಂವಹನ ನಡೆಸಿರುವ ವೈಷ್ಣವ್, ಸಂಘರ್ಷಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವುದಕ್ಕೂ ಮುನ್ನ ಮಾಹಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಮಾಡುವುದನ್ನು ವಿದ್ಯುನ್ಮಾನ ಮಾಧ್ಯಮಗಳು ನಿಲ್ಲಿಸಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದರು.
Advertisement