
ನವದೆಹಲಿ: ಮೂರು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ. ಸಂಜೆ ಐದು ಗಂಟೆಯಿಂದ ಕದನ ವಿರಾಮ ಜಾರಿಯಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ ಎಂದು ವರದಿಯಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರದ 11 ಗಂಟೆಗಳಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದೇ ಅಲ್ಲದೆ ರಾಜಸ್ಥಾನ ಹಾಗೂ ಕಾಶ್ಮೀರದಲ್ಲಿ ಡ್ರೋನ್ ದಾಳಿ ನಡೆಸಿದ್ದು ಆ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದು ಹಾಕಿದೆ.
ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ನಡೆಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಬಳಸಿಕೊಂಡು ದಾಳಿಗೆ ಪಾಕಿಸ್ತಾನ ಯತ್ನಿಸಿತ್ತು. ಈ ಡ್ರೋನ್ ಗಳನ್ನು ಭಾರತೀಯ ಕ್ಷಿಪಣಿ ನಿರೋಧಕ ವ್ಯವಸ್ಥೆ ಮೂಲಕ ಹೊಡೆದುರುಳಿಸಲಾಗಿದೆ.
ಶ್ರೀನಗರದಲ್ಲಿ ಹಲವು ಬಾರಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ರಾಜಸ್ಥಾನದ ಪೋಖ್ರಾನ್ ಹಾಗೂ ಕಾಶ್ಮೀರದ ಬಾರಾಮುಲ್ಲಾದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
ಅಖ್ನೂರ್, ರಾಜೌರಿ ಮತ್ತು ಆರ್ಎಸ್ ಪುರ ವಲಯಗಳಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯು ಫಿರಂಗಿ ದಾಳಿ ನಡೆಸಿದೆ. ಜಮ್ಮುವಿನ ಪಲನ್ವಾಲ್ಲಾ ವಲಯದ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಕದನ ವಿರಾಮ ಉಲ್ಲಂಘನೆ ವರದಿಯಾಗಿದೆ.
ಬಾರಾಮುಲ್ಲಾದಲ್ಲಿ, ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಮತ್ತು ಅನುಮಾನಾಸ್ಪದ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಪತ್ತೆಹಚ್ಚಲಾಗಿದೆ. ಬಾರಾಮುಲ್ಲಾ ಮತ್ತು ಶ್ರೀನಗರ ಎರಡರಲ್ಲೂ ಬ್ಲ್ಯಾಕ್ಔಟ್ ಜಾರಿಗೊಳಿಸಲಾಗಿದೆ. ರಾಜೌರಿಯಲ್ಲಿಯೂ ಡ್ರೋನ್ಗಳು ಕಾಣಿಸಿಕೊಂಡಿವೆ. ಜಮ್ಮು ಪ್ರದೇಶದ ಸಾಂಬಾ ಜಿಲ್ಲೆಯಿಂದ ವಾಯುದಾಳಿಯ ಸೈರನ್ ವರದಿಯಾಗಿದೆ.
"ಕದನ ವಿರಾಮಕ್ಕೆ ಈಗ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಶಬ್ದ ಕೇಳಿಬಂದಿದೆ!!!" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
Advertisement