
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೊಸ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುನ್ಸಿಪಾಲ್ ಕಾರ್ಪೋರೇಷನ್ ನ(MCD)13 ಎಎಪಿ ಕೌನ್ಸಿಲರ್ ಗಳು ಶನಿವಾರ ದಿಢೀರ್ ರಾಜೀನಾಮೆ ನೀಡುವುದರೊಂದಿಗೆ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಸ್ಥಗಿತ ಹಾಗೂ ಪಕ್ಷದೊಳಗೆ ಹೆಚ್ಚಾಗುತ್ತಿರುವ ಆಂತರಿಕ ಭಿನ್ನಮತವನ್ನು ಉಲ್ಲೇಖಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, 'ಇಂದ್ರಪ್ರಸ್ಥ ವಿಕಾಸ್ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಹಿರಿಯ ಕೌನ್ಸಿಲರ್ ಮುಕೇಶ್ ಗೋಯೆಲ್ , ಹೊಸ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣೆಯಾದ ಎರಡೂವರೆ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಪಕ್ಷವು ಆಂತರಿಕ ಕಲಹ, ಆರೋಪ-ಪ್ರತ್ಯಾರೋಪಗಳಲ್ಲಿ ನಿರತವಾಗಿದೆ. ಈ ವಿಚಾರವನ್ನು ಪದೇ ಪದೇ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಕುರಿತು ಆಮ್ ಆದ್ಮಿ ಪಕ್ಷದಿಂದ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚುನಾಯಿತ ಕೌನ್ಸಿಲರ್ಗಳಿಗೆ ತಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣ ಮೀಸಲಿಟ್ಟಿಲ್ಲ ಎಂದು ಗೋಯಲ್ ಆರೋಪಿಸಿದರು.
ಜನಪರ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇವೆ. ಸದನ ಸುಗಮವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ. ಇದು MCD ಗೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದರು. MCD ಸೇರಿದಂತೆ ಮುನ್ಸಿಪಲ್ ಸಂಸ್ಥೆಗಳಿಗೆ ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ.
Advertisement