
ನವದೆಹಲಿ: ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ವಿವರಿಸಲು ವಿದೇಶಗಳಿಗೆ ಸರ್ಕಾರ ನಿಯೋಜಿಸಲಿರುವ ಏಳು ಸರ್ವ ಪಕ್ಷ ನಿಯೋಗಗಳಲ್ಲಿ ಒಂದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮುನ್ನಡೆಸಲಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಅವರ ಹೆಸರನ್ನು ಸೂಚಿಸಿಲ್ಲ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, ನನ್ನ ಸಾಮರ್ಥ್ಯ ಅಥವಾ ಕೊರತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನನ್ನ ಪಕ್ಷದ ನಾಯಕತ್ವ ಹೊಂದಿದೆ ಮತ್ತು ಅದನ್ನು ವಿವರಿಸುವುದು ಅವರ ಜಬಾಬ್ದಾರಿ ಎಂದು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಆಕ್ಷೇಪಕ್ಕೆ ನಯವಾಗಿಯೇ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ನನ್ನ ಹೆಸರು ಸೂಚಿಸದಿರುವ ಕುರಿತು ನಾನು ಯಾವುದೇ ಹೇಳಿಕೆ ನೀಡಲಾರೆ. ನನಗೆ ಈ ಜವಾಬ್ದಾರಿ ವಹಿಸಿರುವುದಕ್ಕೆ ಗೌರವವಿದೆ. ವಿಶ್ವಸಂಸ್ಥೆಯಲ್ಲಾಗಲಿ ಅಥವಾ ಕಾಂಗ್ರೆಸ್ ಪಕ್ಷದಲ್ಲಾಗಲಿ ನನ್ನ ಸುದೀರ್ಘ ಸೇವಾ ಅವಧಿಯಲ್ಲಿ ನನಗೆ ವಹಿಸಲಾದ ಪ್ರತಿಯೊಂದು ಕರ್ತವ್ಯವನ್ನು ಜವಾಬ್ದಾರಿಯಿಂದ ಪೂರೈಸಿದ್ದೇನೆ. ಈ ಜವಾಬ್ದಾರಿಯನ್ನು ಅದೇ ರೀತಿ ಪೂರೈಸುತ್ತೇನೆ ಎಂದು ತಿಳಿಸಿದರು.
ವಿವಿಧ ವಿಷಯಗಳ ಕುರಿತು ಸೋಮವಾರ ಮತ್ತು ಮಂಗಳವಾರ ನಡೆಯಲಿರುವ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆಸುತ್ತೇವೆ. ನನಗೆ ಬಂದ ಮೊದಲ ಕರೆ ಬಗ್ಗೆ ಪಕ್ಷಕ್ಕೆ ಎರಡು ದಿನಗಳ ಹಿಂದೆಯೇ ತಿಳಿಸಿದ್ದೇನೆ. ಈ ಬಗ್ಗೆ ವಿರೋಧ ಪಕ್ಷದ ನಾಯಕತ್ವದೊಂದಿಗೆ ಮಾತನಾಡುವಂತೆ ಸಂಸದೀಯ ವ್ಯವಹಾರಗಳ ಸಚಿವರಿಗೆ ಹೇಳಿದ್ದೆ. ಅವರು ಕೂಡಾ ಮಾತನಾಡುವುದಾಗಿ ನನಗೆ ಭರವಸೆ ನೀಡಿದ್ದರು. ನಿರ್ದಿಷ್ಟ ವಿಷಯವೊಂದರ ಬಗ್ಗೆ ಎಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದು ಹೇಳಿದರು.
"ನನ್ನ ಅಭಿಪ್ರಾಯದಲ್ಲಿ, ಪಕ್ಷ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತು, ಒಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಇದು ಏಕತೆ ಮುಖ್ಯವಾದ ಸಮಯದಲ್ಲಿ ರಾಷ್ಟ್ರೀಯ ಏಕತೆಯ ಉತ್ತಮ ಪ್ರತಿಬಿಂಬವಾಗಿದೆ" ಎಂದು ಅವರು ಹೇಳಿದರು.
ಇದಕ್ಕೂ ತಾನು ನೀಡಿದ್ದ ನಾಲ್ಕು ಸಂಸದರ ಹೆಸರುಗಳನ್ನು ಬಿಟ್ಟು ಶಶಿ ತರೂರ್ ಹೆಸರನ್ನು ಅಂತಿಮಗೊಳಿಸಿರುವುದಕ್ಕೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿತ್ತು. ತಾನು ನೀಡಿರುವ ಸಂಸದರ ಪಟ್ಟಿಯನ್ನು "ಬದಲಾಯಿಸುವುದಿಲ್ಲ" ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರದ್ದು ಅಪ್ರಾಮಾಣಿಕತೆ" ಎಂದು ಹೇಳಿದರು.
Advertisement