
ಡೆಹ್ರಾಡೂನ್: ಉತ್ತರಾಖಂಡ್ ನ ರಾಜಧಾನಿ ಡೆಹ್ರಾಡೂನ್ , ಪವಿತ್ರ ನಗರ ಹರಿದ್ವಾರ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಅಲ್ಲದೇ, ಅಕ್ರಮವಾಗಿ ವಾಸಿಸುವುದಕ್ಕೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಭಾರತೀಯ ಮಹಿಳೆಯೊಬ್ಬರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರಿಗೆ ದೊರೆತ ಗೌಪ್ಯ ಮಾಹಿತಿ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ..ಈ ಕುರಿತು TNIE ಯೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅಜಯ್ ಸಿಂಗ್ ಕಾರ್ಯಾಚರಣೆಯನ್ನು ಖಚಿತಪಡಿಸಿದರು.
ಸುಳಿವು ಆಧರಿಸಿ, ವಿಶೇಷ ಕಾರ್ಯಾಚರಣೆ ಪಡೆ ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ಕ್ಲೆಮೆಂಟ್ ಟೌನ್ ನಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ. ಅವರ ಬಳಿ ಯಾವುದೇ ಮಾನ್ಯವಾದ ದಾಖಲೆಗಳು ಇರಲಿಲ್ಲ. ಅಕ್ರಮವಾಗಿ ಮಾಡಿಸಿಕೊಂಡಿದ್ದಎರಡು ಆಧಾರ್ ಕಾರ್ಡ್ ಹಾಗೂ ಬಾಂಗ್ಲಾದೇಶದ ಗುರುತಿನ ಚೀಟಿ ಪತ್ತೆಯಾಗಿವೆ ಎಂದು ಅವರು ತಿಳಿಸಿದರು.
ಬಂಧಿತರ ಜೊತೆಗಿದ್ದ ನಾಲ್ವರು ಮಕ್ಕಳನ್ನು ರಕ್ಷಣೆಗೆ ತೆಗೆದುಕೊಳ್ಳಲಾಗಿದೆ. ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಭಾರತದ ಪೂಜಾ ರಾಣಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಿಟಿ ಕೊತ್ವಾಲಿ ಪೊಲೀಸರು ಮತ್ತು ಸ್ಥಳೀಯ ಗುಪ್ತಚರ ಘಟಕಗಳು ಶುಕ್ರವಾರ ರಾತ್ರಿ ರೂಡ್ಕಿ ಬೆಲಾವಾಲಾ ಪ್ರದೇಶದಲ್ಲಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆ ಮತ್ತು ಆಕೆಯ ಭಾರತೀಯ ಪತಿಯನ್ನು ಬಂಧಿಸಿದ್ದಾರೆ.
ಬಂಧಿತರು ನಕಲಿ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಮಹಿಳೆಯ ಅಪ್ರಾಪ್ತ ಮಗನನ್ನೂ ರಕ್ಷಣೆಗೆ ತೆಗೆದುಕೊಳ್ಳಲಾಗಿದೆ ಎಂದು ಅಜಯ್ ಸಿಂಗ್ ಮಾಹಿತಿ ನೀಡಿದರು.
Advertisement