
ನವದೆಹಲಿ: ತಮ್ಮ ನಾಯಕತ್ವದ ಬಗ್ಗೆ ಹೆಚ್ಚುತ್ತಿರುವ ಟೀಕೆಗಳು ಮತ್ತು ಪ್ರಶ್ನೆಗಳಿಂದ ಗಮನ ಬೇರೆಡೆ ಸೆಳೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದ್ದಕ್ಕಿದ್ದಂತೆ ವಿದೇಶಗಳಿಗೆ ವಿಪಕ್ಷಗಳ ನಿಯೋಗಗಳನ್ನು ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 34 ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಿ ಅಕ್ಟೋಬರ್-ನವೆಂಬರ್ನಲ್ಲಿ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಗೆ ವಿವಿಧ ಪಕ್ಷಗಳ ಸಂಸದರನ್ನು ಕಳುಹಿಸುವ ಪದ್ಧತಿ 1950 ರ ದಶಕದಿಂದಲೂ ಜಾರಿಯಲ್ಲಿದೆ. ಆದರೆ, 2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ಈ ಸಂಪ್ರದಾಯವನ್ನು ನಿಲ್ಲಿಸಲಾಯಿತು.
ಈಗ, ಹತಾಶ ಮತ್ತು ಗಂಭೀರ ಪ್ರಶ್ನೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ವಿದೇಶಗಳಿಗೆ ಸರ್ವಪಕ್ಷ ಸಂಸದರ ನಿಯೋಗಗಳ ಕಳುಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ರಾಜೀವ್ ಗಾಂಧಿಯವರಿಗೆ ಗೌರವಸಲ್ಲಿಸಿರುವ ಅವರು, ರಾಜೀವ್ ಗಾಂಧಿಯವರ "ಮಾನವೀಯತೆ, ಒಳ್ಳೆಯತನ ಮತ್ತು ಸಭ್ಯತೆ ಗುಣಗಳು ಪ್ರಸ್ತುತ ಪ್ರಧಾನಿಯಲ್ಲಿ ಕಾಣೆಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಾಜಪೇಯಿ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದರೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿದೇಶದಲ್ಲಿ ಸರ್ಕಾರಿ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗುವಂತೆ ಮಾಡಿದ ಹಾಗೂ ಚಿಕಿತ್ಸೆ ಬಗ್ಗೆ ವಾಜಪೇಯಿಯವರು ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Advertisement