
ನವದೆಹಲಿ: ತ್ವರಿತ ಕ್ಯಾಬ್ ಸೇವೆ ಪಡೆಯಲು ಕ್ಯಾಬ್ ಬುಕಿಂಗ್ಗೂ ಮೊದಲೇ ಗ್ರಾಹಕರಿಗೆ ಹಣ ಪಾವತಿ (ಮುಂಗಡ ಟಿಪ್) ಮಾಡುವಂತೆ ಒತ್ತಾಯಿಸುತ್ತಿದ್ದ ಉಬರ್ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.
ಉಬರ್ ಕ್ರಮದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ತ್ವರಿತ ಸೇವೆಗೆ ಬಳಕೆದಾರರಿಂದ ಸೇವೆಗೂ ಮೊದಲೇ ಹಣ ಪಡೆಯುವುದು ಸರಿಯಾದ ಕ್ರಮವಲ್ಲ. ಈ ಕ್ರಮವು ಗ್ರಾಹಕರ ಮೇಲೆ ಒತ್ತಡ ಹೇರಿದಂತಾಗುತ್ತದೆ. ಅಲ್ಲದೆ, ನ್ಯಾಯಸಮ್ಮತವಲ್ಲದ ವ್ಯಾಪಾರ ಚಟುವಟಿಕೆಯಾಗಿದೆ. ಕಂಪನಿಯು ತನ್ನ ಸೇವೆಯಲ್ಲಿ ನ್ಯಾಯೋಚಿತ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.
ಅಲ್ಲದೆ, ಉಬರ್ನ ಈ ಧೋರಣೆ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದರು.
ಇದರ ಬೆನ್ನಲ್ಲೇ ಉಬರ್ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಹಾಗಾಗಿ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ವು, ವಿವರಣೆ ಕೋರಿ, ಉಬರ್ ಕಂಪನಿಗೆ ನೋಟಿಸ್ ನೀಡಿದೆ.
ಕೇವಲ ಉಬರ್ ಅಷ್ಟೇ ಅಲ್ಲದೆ, ರ್ಯಾಪಿಡೋ ಕೂಡ ಗ್ರಾಹಕರ ಬಳಿ ತ್ವರಿತ ಸೇವೆಗೆ ಹೆಚ್ಚಿನ ಹಣಕ್ಕೆ ಒತ್ತಾಯಿಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗ್ರಾಹಕರ ಕಾಳಜಿಗಳನ್ನು ಎತ್ತಿ ತೋರಿಸುವ ಡಿಜಿಟಲ್ ಸಮುದಾಯ ವೇದಿಕೆಯಾದ ಲೋಕಲ್ಸರ್ಕಲ್ಸ್ನ ಸಂಸ್ಥಾಪಕ ಸಚಿನ್ ತಪರಿಯಾ ಅವರು ಮಾತನಾಡಿ, ಇಂತಹ ಬೆಳವಣಿಗೆಗಳು ಡಾರ್ಕ್ ಪ್ಯಾಟರ್ನ್ಸ್" ಎಂದು ಕರೆಯಲ್ಪಡುವ ವಿದ್ಯಮಾನದ ಭಾಗವಾಗಿದೆ ಎಂದು ಹೇಳಿದ್ದಾರೆ.
“ಲೋಕಲ್ಸರ್ಕಲ್ಸ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ವರದಿಯಾಗಿರುವಂತೆ ಗ್ರಾಹಕರು ವಿವಿಧ ಡಾರ್ಕ್ ಪ್ಯಾಟರ್ನ್ಗಳ ಬಗ್ಗೆ ಜಾಗೃತರಾಗುತ್ತಿದ್ದಾರೆಂದು ತಿಳಿಸಿದ್ದಾರೆ.
ಡಾರ್ಕ್ ಪ್ಯಾಟರ್ನ್ ಒಂದು ಮೋಸಗೊಳಿಸುವ ಬಳಕೆದಾರ ಇಂಟರ್ಫೇಸ್ ವಿನ್ಯಾಸವನ್ನು ಸೂಚಿಸುತ್ತದೆ. ಅದು ಬಳಕೆದಾರರು ತಾವು ಆಯ್ಕೆ ಮಾಡದೇ ಇರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಗ್ರಾಹಕರ ಸ್ವಾಯತ್ತತೆ ಮತ್ತು ಆಯ್ಕೆಯನ್ನು ದುರ್ಬಲಗೊಳಿಸುತ್ತದೆ. ಉದಾಹರಣೆಗೆ ವಹಿವಾಟುಗಳನ್ನು ರದ್ದುಗೊಳಿಸುವುದು ಕಷ್ಟಕರವಾಗಿಸುವುದು, ಅತಿಯಾದ ಸ್ಕ್ರೋಲಿಂಗ್, ಸ್ವಯಂ-ಪ್ಲೇಯಿಂಗ್ ವೀಡಿಯೊಗಳು ಮತ್ತು ಆಗಾಗ್ಗೆ ಬರುವ ನೋಟಿಫಿಕೇಷನ್ಗಳು ಇದರಲ್ಲಿ ಸೇರಿವೆ.
Advertisement