
ನವದೆಹಲಿ: 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಡಿ ಭಾರತದ ಸೇನಾ ದಾಳಿಗಳ ಕುರಿತು ಕೊಲಂಬಿಯಾ ಇತ್ತೀಚೆಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯಿಂದ ಬಲಿಯಾದವರಿಗೆ ಸಹಾನುಭೂತಿ ತೋರುವ ಬದಲು ಭಾರತದ ದಾಳಿಯಿಂದ ಪಾಕಿಸ್ತಾನದಲ್ಲಾದ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಕೊಲಂಬಿಯಾ ಸರ್ಕಾರದ ಪ್ರತಿಕ್ರಿಯೆ ನಮಗೆ ಸ್ವಲ್ಪ ನಿರಾಶೆ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ವಿವರಿಸಲು ವಿದೇಶಕ್ಕೆ ತೆರಳಿರುವ ಸರ್ವ ಪಕ್ಷ ನಿಯೋಗದ ಭಾಗವಾಗಿರುವ ಶಶಿ ತರೂರ್ ಸದ್ಯ ಬುಗೋಟಾದಲ್ಲಿದ್ದಾರೆ.
ಬುಗೋಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ನಾವಿಲ್ಲಿ ಅರ್ಥ ಮಾಡಿಸುವುದನ್ನು ನೋಡುತ್ತಿದ್ದೇವೆ. ಕೊಲಂಬಿಯಾ ಸರ್ಕಾರ ಬಹುಶಃ ಆ ಹೇಳಿಕೆ ನೀಡಿದಾಗ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಎಂಬ ಅನಿಸಿಕೆ ನಮಗಿದೆ. ಅರ್ಥ ಮಾಡಿಸುವುದು ನಮಗೆ ಬಹಳ ಮುಖ್ಯವಾಗಿದೆ. ನಮ್ಮದು ನಿಜವಾಗಿಯೂ ವಿಶ್ವದ ರಚನಾತ್ಮಕ ಪ್ರಗತಿಗೆ ಶಕ್ತಿಯಾಗಿರುವ ದೇಶ ಎಂದು ಅವರು ಹೇಳಿದರು.
ಕೊಲಂಬಿಯಾ ನಿಲುವನ್ನು ಮರು ಪರಿಶೀಲಿಸಬೇಕು:
ಭಾರತದ ದಾಳಿ ಆತ್ಮರಕ್ಷಣೆಯ ವಿಷಯವಾಗಿದೆಯೇ ಹೊರತು ಆಕ್ರಮಣಕಾರಿಯಲ್ಲ. ಉಗ್ರರಿಗೆ ರಕ್ಷಣೆ ನೀಡುವವರಿಗೆ ಹಾಗೆ ಮಾಡದಂತೆ ಇತರ ಸರ್ಕಾರಗಳು ಹೇಳುತ್ತವೆ ಎಂದು ನಾವು ಭಾವಿಸುತ್ತೇವೆ. ಅದು ಭದ್ರತಾ ಮಂಡಳಿಯಲ್ಲಿ ಅಥವಾ ಅದರ ಹೊರಗೆ ಇದರಿಂದ ನಿಜವಾಗಿಯೂ ತುಂಬಾ ನೆರವಾಗುತ್ತದೆ. ಕೊಲಂಬಿಯಾ ಹೇಳಿಕೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.
ಉಗ್ರರಿಗೆ ಪಾಕ್ ನೆರವು ಕುರಿತು ಸಾಕ್ಷ್ಯಧಾರ:
ಭಯೋತ್ಪಾದಕರನ್ನು ಕಳುಹಿಸುವ ಮತ್ತು ಅವರನ್ನು ವಿರೋಧಿಸುವವರ ನಡುವೆ ಯಾವುದೇ ಸಮಾನತೆ ಇರಬಾರದು. ದಾಳಿ ಮಾಡುವವರು ಮತ್ತು ರಕ್ಷಿಸುವವರ ನಡುವೆ ಯಾವುದೇ ಸಮಾನತೆ ಇರಲು ಸಾಧ್ಯವಿಲ್ಲ. ನಮ್ಮ ಆತ್ಮರಕ್ಷಣೆಯ ಹಕ್ಕನ್ನು ಮಾತ್ರ ಚಲಾಯಿಸುತ್ತಿದ್ದೇವೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಗೆ ಸಂಬಂಧವಿದೆ ಎಂಬುದಕ್ಕೆ ಭಾರತದ ಬಳಿ ಪುರಾವೆಗಳಿವೆ ಎಂದು ತರೂರ್ ಒತ್ತಿ ಹೇಳಿದರು.
ಭಾರತದ ಕ್ರಮದ ಬಗ್ಗೆ ಗೊಂದಲವಿದ್ದರೆ ಅದನ್ನು ಸ್ಪಷ್ಟಪಡಿಸುತ್ತೇವೆ. ಯಾವುದೇ ತಪ್ಪು ತಿಳುವಳಿಕೆ ಇದ್ದರೆ ಅದನ್ನು ಹೋಗಲಾಡಿಸಲು ನಾವು ಇಲ್ಲಿದ್ದೇವೆ. ಸಂದರ್ಭಗಳ ಬಗ್ಗೆ ಕೊಲಂಬಿಯಾದೊಂದಿಗೆ ಸ್ವಲ್ಪ ವಿವರವಾಗಿ ಮಾತನಾಡಲು ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
Advertisement