
ನವದೆಹಲಿ: ಪಾಕಿಸ್ತಾನದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ಭಾರತ ಎಷ್ಟು ಜೆಟ್ ಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಆಪರೇಷನ್ ಸಿಂಧೂರನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಧ್ವಂಸಗೊಂಡಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಒಪ್ಪಿಕೊಂಡ ನಂತರ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಆದಾಗ್ಯೂ, ಜನರಲ್ ಚೌಹಾಣ್ ಅವರು ಆರು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಹೇಳಿಕೆಯನ್ನು "ಸಂಪೂರ್ಣವಾಗಿ ತಪ್ಪು" ಎಂದು ತಳ್ಳಿಹಾಕಿದ್ದಾರೆ.
ಸಿಡಿಎಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಉತ್ತಮ್ ಕುಮಾರ್ ರೆಡ್ಡಿ, ಸಂಘರ್ಷದ ಸಮಯದಲ್ಲಿ, ವಿಶೇಷವಾಗಿ ಸಿಡಿಎಸ್ "ಪ್ರವೇಶ"ದ ನಂತರ ಭಾರತದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ದೇಶವು ತಿಳಿದುಕೊಳ್ಳಲು ಬಯಸಿದೆ ಎಂದಿದ್ದಾರೆ.
"ಒಂದು ಸರ್ಕಾರ ಪಾರದರ್ಶಕವಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ಹೊಣೆಗಾರಿಕೆ ಸಾಮಾನ್ಯ. ಇದು ದೇಶಭಕ್ತಿಯ ಬಗ್ಗೆ ಅಲ್ಲ. ನಾವು ಅವರಿಗಿಂತ ಹೆಚ್ಚು ದೇಶಭಕ್ತರು. ಗಾಂಧಿ ಕುಟುಂಬ, ಸ್ವತಃ ದೇಶದ ಸಮಗ್ರತೆಗಾಗಿ ಭಾರಿ ತ್ಯಾಗಗಳನ್ನು ಮಾಡಿದೆ. ಆದರೂ ಈ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಇದು ನಿಜವಾಗಿಯೂ ಆಘಾತಕಾರಿ, ವಿಚಿತ್ರ" ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಪ್ರತಿಯೊಂದು ಪ್ರಯತ್ನದಲ್ಲೂ ಕಾಂಗ್ರೆಸ್ ಭಾರತೀಯ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.
Advertisement