

ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಪ್ರಮುಖ ಪಾಠಗಳನ್ನು ಕಲಿಸಿತು ಮತ್ತು ಇದು ಭಾರತೀಯ ಸೇನೆಯ ಬಲವನ್ನು ಪ್ರದರ್ಶಿಸುವುದರೊಂದಿಗೆ ಪಾಕಿಸ್ತಾನಕ್ಕೆ ಭಾರತದ ಸಾಮರ್ಥ್ಯ ಏನೆಂಬುದನ್ನು ತಿಳಿಸಿತು ಎಂದು ಹೇಳಿದ್ದಾರೆ.
'ಆಪರೇಷನ್ ಸಿಂಧೂರ್ ಕೇವಲ ಟ್ರೇಲರ್ ಆಗಿದ್ದು, ಅದು 88 ಗಂಟೆಗಳಲ್ಲಿ ಕೊನೆಗೊಂಡಿತು. ಭವಿಷ್ಯದಲ್ಲಿ ಯಾವುದೇ ಪರಿಸ್ಥಿತಿಗೆ ನಾವು ಸಿದ್ಧರಿದ್ದೇವೆ. ಪಾಕಿಸ್ತಾನ ಅವಕಾಶ ನೀಡಿದರೆ, ನೆರೆಯ ರಾಷ್ಟ್ರದೊಂದಿಗೆ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ನಾವು ಅದಕ್ಕೆ ಕಲಿಸುತ್ತೇವೆ' ಎಂದು ಜನರಲ್ ದ್ವಿವೇದಿ ಸೋಮವಾರ ನವದೆಹಲಿಯಲ್ಲಿ ನಡೆದ 'ಚಾಣಕ್ಯ ರಕ್ಷಣಾ ಸಂವಾದ' ಕಾರ್ಯಕ್ರಮದಲ್ಲಿ ಹೇಳಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ, ಪಡೆಗಳ ನಡುವಿನ ಏಕೀಕರಣ, ದೀರ್ಘ ಯುದ್ಧಕ್ಕೆ ಸರಿಯಾದ ಸರಬರಾಜುಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಮಾಂಡ್ ಸರಪಳಿಯ ಪ್ರತಿಯೊಂದು ಹಂತದಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಮೂರು ಪ್ರಮುಖ ಅಂಶಗಳನ್ನು ಕಲಿಯಲಾಯಿತು ಎಂದರು.
'ಯಾವುದೇ ಕಾರ್ಯಾಚರಣೆ ನಡೆದಾಗಲೆಲ್ಲ ನಾವು ಅದರಿಂದ ಕಲಿಯುತ್ತೇವೆ. ಈ ಬಾರಿಯೂ ನಾವು ಕೆಲ ವಿಷಯಗಳನ್ನು ಕಲಿತಿದ್ದೇವೆ. ನಾವು ಕಲಿತ ಒಂದು ವಿಷಯವೆಂದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನಮಗೆ ಬಹಳ ಕಡಿಮೆ ಸಮಯವಿರುತ್ತದೆ ಮತ್ತು ಪ್ರತಿ ಹಂತದಲ್ಲೂ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದರು.
ಇಂದಿನ ಯುದ್ಧಗಳು ಬಹು-ಕ್ಷೇತ್ರಗಳಾಗಿರುವುದರಿಂದ ಎಲ್ಲ ಪಡೆಗಳ ನಡುವಿನ ಸಮನ್ವಯ ಮುಖ್ಯವಾಗಿರುತ್ತದೆ. ಸೇನೆಯಿಂದ ಮಾತ್ರ ಯುದ್ಧ ಮಾಡಲು ಸಾಧ್ಯವಿಲ್ಲ, ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದು ಅವರು ವಾಯುಪಡೆ ಮತ್ತು ನೌಕಾಪಡೆಯನ್ನು ಉಲ್ಲೇಖಿಸುತ್ತಾ ಹೇಳಿದರು.
'ಯುದ್ಧವು ಎಷ್ಟು ಕಾಲ ನಡೆಯುತ್ತದೆ ಎಂದು ಇಂದಿಗೂ ನಾವು ಹೇಳಲು ಸಾಧ್ಯವಿಲ್ಲ. ಈ ಬಾರಿ ನಾವು 88 ಗಂಟೆಗಳ ಕಾಲ ಹೋರಾಡಿದೆವು; ಮುಂದಿನ ಬಾರಿ ಅದು ನಾಲ್ಕು ತಿಂಗಳು ಅಥವಾ ನಾಲ್ಕು ವರ್ಷಗಳಾಗಬಹುದು. ಅದನ್ನು ನೋಡಿದರೆ, ಅದನ್ನು ಎದುರಿಸಲು ನಮ್ಮಲ್ಲಿ ಸಾಕಷ್ಟು ಸರಬರಾಜು ಮತ್ತು ಶಸ್ತ್ರಾಸ್ತ್ರಗಳಿವೆಯೇ? ನಮ್ಮಲ್ಲಿ ಇಲ್ಲದಿದ್ದರೆ, ನಾವು ಅದಕ್ಕೆ ಸಿದ್ಧರಾಗಬೇಕು' ಎಂದು ಅವರು ಹೇಳಿದರು.
'ಒಂದು ದೇಶವು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದಾಗ, ಅದು ಭಾರತಕ್ಕೆ ಕಳವಳಕಾರಿ ವಿಷಯವಾಗುತ್ತದೆ. ಭಾರತ ಪ್ರಗತಿಯ ಬಗ್ಗೆ ಮಾತನಾಡುತ್ತದೆ. ನಮ್ಮ ಹಾದಿಯಲ್ಲಿ ಯಾರಾದರೂ ಅಡೆತಡೆಗಳನ್ನು ಸೃಷ್ಟಿಸಿದರೆ, ನಾವು ಅವರ ವಿರುದ್ಧ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ' ಎಂದರು.
'ನಾವು ಕೇಳುತ್ತಿರುವುದು ಶಾಂತಿಯುತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದು, ಅದಕ್ಕೆ ನಾವು ಸಹಕರಿಸುತ್ತೇವೆ. ಅಲ್ಲಿಯವರೆಗೆ, ನಾವು ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರನ್ನು ಸಮಾನವಾಗಿ ನಡೆಸಿಕೊಳ್ಳುತ್ತೇವೆ'. 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ ಇಳಿಕೆ ಕಂಡುಬಂದಿದೆ. ಇದರ ನಂತರ, ರಾಜಕೀಯ ಸ್ಪಷ್ಟತೆ ಬಂದಿದೆ ಎಂದು ಅವರು ಹೇಳಿದರು.
Advertisement