ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟವಾಗಿ ವಿಳಂಬ ಮಾಡಲು ಸಾಧ್ಯವಿಲ್ಲ; ಹಾಗೆಂದು ಅನುಮೋದನೆಗೆ ನಾವು ಕಾಲಮಿತಿ ನಿಗದಿಪಡಿಸಲಾಗದು: ಸುಪ್ರೀಂ ಕೋರ್ಟ್

ಭಾರತದ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ, ಮಸೂದೆಯ ಕುರಿತು ಸದನದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜ್ಯಪಾಲರು ಸಂವಾದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕೆ ಹೊರತು ಅದಕ್ಕೆ ಅಡ್ಡಿಪಡಿಸಬಾರದು ಎಂದು ಸಂವಿಧಾನ ಪೀಠ ಹೇಳಿದೆ.
Supreme court
ಸುಪ್ರೀಂ ಕೋರ್ಟ್
Updated on

ನವದೆಹಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಷ್ಟ್ರಪತಿಗಳು, ರಾಜ್ಯಪಾಲರು ಅನಿರ್ದಿಷ್ಟ ಅವಧಿಯವರೆಗೆ ಒಪ್ಪಿಗೆಯನ್ನು ತಡೆಹಿಡಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 143(1) ನೇ ವಿಧಿಯಡಿಯಲ್ಲಿ ಉಲ್ಲೇಖಿಸಲಾದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು ತೀರ್ಪು ನೀಡಿದೆ. "ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ಪರಿಶೀಲಿಸಲು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಅನಿಯಂತ್ರಿತ ಅಧಿಕಾರವಿರುವುದಿಲ್ಲ'' ಎಂದು ಹೇಳಿದೆ.

ಭಾರತದ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ, ಮಸೂದೆಯ ಕುರಿತು ಸದನದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜ್ಯಪಾಲರು ಸಂವಾದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕೆ ಹೊರತು ಅದಕ್ಕೆ ಅಡ್ಡಿಪಡಿಸಬಾರದು" ಎಂದು ಸಂವಿಧಾನ ಪೀಠ ಹೇಳಿದೆ.

ಸಮಯ ಮಿತಿ ವಿಧಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ

ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರ್ಧರಿಸುವಾಗ ರಾಜ್ಯಪಾಲರು ವಿವೇಚನೆಯನ್ನು ಹೊಂದಿರುತ್ತಾರೆ. ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ಕ್ಯಾಬಿನೆಟ್‌ನ ಸಹಾಯ ಮತ್ತು ಸಲಹೆಯಂತೆ ಕಾರ್ಯನಿರ್ವಹಿಸಬೇಕಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿದರೆ, ಮಸೂದೆಯನ್ನು ಶಾಸಕಾಂಗಕ್ಕೆ ಹಿಂತಿರುಗಿಸಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಕಾರ್ಯಕಾರಿ ಭಾಗವನ್ನು ಓದಿದ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ಅವರು, ರಾಜ್ಯಪಾಲರು ಒಪ್ಪಿಗೆ ನೀಡಲು ಸಮಯ ಮಿತಿಗಳನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದರು. ಒಪ್ಪಿಗೆ ಎಂದು ಪರಿಗಣಿಸಲಾಗುವ ಪರಿಕಲ್ಪನೆಯು ಸಂವಿಧಾನದ ಆಶಯ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಪೀಠವು ಹೇಳಿದೆ.

ರಾಜ್ಯಪಾಲರನ್ನು ತಮ್ಮ ನಿರ್ಧಾರಗಳಿಗೆ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲವಾದರೂ, ಸಾಂವಿಧಾನಿಕ ನ್ಯಾಯಾಲಯಗಳು ಅವುಗಳನ್ನು ಪರಿಶೀಲಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ರಾಜ್ಯಪಾಲರು ಸಮಂಜಸ ಅವಧಿಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶಿಸುವುದನ್ನು ಹೊರತುಪಡಿಸಿ ನ್ಯಾಯಾಲಯಕ್ಕೆ ಯಾವುದೇ ಸಮಯ ಮಿತಿಯನ್ನು ವಿಧಿಸಲು ಸಾಧ್ಯವಿಲ್ಲ ಎಂದರು.

Supreme court
ಇದೇ ಮೊದಲು: ರಾಜ್ಯಪಾಲರು ಕಳಿಸಿದ ಮಸೂದೆ ಇತ್ಯರ್ಥಕ್ಕೆ ರಾಷ್ಟ್ರಪತಿಗಳಿಗೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಸಂವಿಧಾನವನ್ನು ರಕ್ಷಿಸುವಲ್ಲಿ ರಾಷ್ಟ್ರಪತಿಗಳ ಪಾತ್ರವು ಸಂಘಟಿತ ಘಟಕವಾಗಿ ಒಕ್ಕೂಟದ ಮೇಲೆ ಬದ್ಧವಾಗಿದೆ. ರಾಜ್ಯಪಾಲರು ಮಸೂದೆಯನ್ನು ತಮ್ಮ ಒಪ್ಪಿಗೆಗಾಗಿ ಕಾಯ್ದಿರಿಸದ ಹೊರತು ರಾಷ್ಟ್ರಪತಿಗಳು ಈ ಆಯ್ಕೆಯನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ. ಮಂತ್ರಿ ಮಂಡಳಿಯು ಮಸೂದೆಯನ್ನು ಹಿಂತಿರುಗಿಸಲು ಅಥವಾ ರಾಷ್ಟ್ರಪತಿಗೆ ಉಲ್ಲೇಖಿಸಲು ರಾಜ್ಯಪಾಲರಿಗೆ ಸಲಹೆ ನೀಡುವ ಸಾಧ್ಯತೆಯಿಲ್ಲ. 200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ವಿವೇಚನೆಯಿಂದ ಅಧಿಕಾರವಿಲ್ಲ ಎಂದು ಹೇಳುವುದು ಅಸಂಭವವಾಗಿದೆ ಎಂದು ಪೀಠ ಹೇಳಿದೆ.

ಕೇಂದ್ರ, ಹಲವಾರು ರಾಜ್ಯಗಳು ಮತ್ತು ಇತರ ಪಕ್ಷಗಳನ್ನು ಒಳಗೊಂಡ 10 ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 11 ರಂದು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ ಎಸ್ ನರಸಿಂಹ ಮತ್ತು ಎ ಎಸ್ ಚಂದೂರ್ಕರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಇಂದು ಈ ತೀರ್ಪು ನೀಡಿತು.

ಮೇ 13 ರಂದು ರಾಷ್ಟ್ರಪತಿ ಮುರ್ಮು ಅವರು ವಿಧಿ 143(1) ರ ಅಡಿಯಲ್ಲಿ ತಮ್ಮ ಅಪರೂಪದ ಅಧಿಕಾರವನ್ನು ಚಲಾಯಿಸಿ, ರಾಜ್ಯ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಮೇಲೆ ನಿಗದಿತ ಸಮಯ ಮಿತಿಗಳನ್ನು ವಿಧಿಸಬಹುದೇ ಎಂಬುದರ ಕುರಿತು ನ್ಯಾಯಾಲಯದ ಅಭಿಪ್ರಾಯವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

Supreme court
'ರಾಷ್ಟ್ರಪತಿ, ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಲು ನೀವು ಸಮಯ ಮಿತಿಯನ್ನು ನಿಗದಿಪಡಿಸಬಹುದೇ?': ಸುಪ್ರೀಂ ಕೋರ್ಟ್ ಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ!

ವಿಚಾರಣೆಯ ಸಮಯದಲ್ಲಿ, ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಏಪ್ರಿಲ್ 8 ರ ತೀರ್ಪನ್ನು ಮಾರ್ಪಡಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ರಾಷ್ಟ್ರಪತಿಗಳ ಉಲ್ಲೇಖವನ್ನು ವಿರೋಧಿಸಿ ಏಪ್ರಿಲ್ 8 ರ ತೀರ್ಪನ್ನು ಸಮರ್ಥಿಸಿಕೊಂಡವು. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಮೇಲೆ ವಿಧಿಸಲಾದ ಸಮಯ ಮಿತಿಗಳನ್ನು ಉಲ್ಲಂಘಿಸಬಾರದು ಎಂದು ಒತ್ತಾಯಿಸಿದವು.

ರಾಷ್ಟ್ರಪತಿಗಳು ಉಲ್ಲೇಖಿಸಿದ 14 ಪ್ರಶ್ನೆಗಳಲ್ಲಿ, ಅತ್ಯಂತ ಮಹತ್ವದ್ದು:

  • ಭಾರತದ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಮಸೂದೆಯನ್ನು ಮಂಡಿಸಿದಾಗ ರಾಜ್ಯಪಾಲರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳು ಯಾವುವು?

  • ರಾಜ್ಯಪಾಲರು, ಆರ್ಟಿಕಲ್ 200 ರ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಚಲಾಯಿಸುವಾಗ, ಮಂತ್ರಿ ಮಂಡಳಿಯು ನೀಡುವ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆಯೇ?

  • ಆರ್ಟಿಕಲ್ 200 ರ ಅಡಿಯಲ್ಲಿ ರಾಜ್ಯಪಾಲರು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?

  • ಆರ್ಟಿಕಲ್ 200 ರ ಅಡಿಯಲ್ಲಿ ರಾಜ್ಯಪಾಲರ ಕ್ರಮಗಳ ನ್ಯಾಯಾಂಗ ಪರಿಶೀಲನೆಗೆ ಆರ್ಟಿಕಲ್ 361 ಸಂಪೂರ್ಣ ನಿರ್ಬಂಧವೇ?

  • ಸಾಂವಿಧಾನಿಕವಾಗಿ ಸೂಚಿಸಲಾದ ಸಮಯದ ಮಿತಿ ಇಲ್ಲದಿರುವಾಗ, ಸಮಯ ಮಿತಿಗಳನ್ನು ವಿಧಿಸಬಹುದೇ ಮತ್ತು ಆರ್ಟಿಕಲ್ 200 ರ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುವ ವಿಧಾನವನ್ನು ನ್ಯಾಯಾಂಗ ಆದೇಶಗಳ ಮೂಲಕ ಸೂಚಿಸಬಹುದೇ? ಎಂದು ಕೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com