

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಜಿಲ್ಲೆಯ ಮಾಲೆಗಾಂವ್ನಲ್ಲಿ ಮತದಾರರಿಗೆ ಬಹಿರಂಗ ಬೆದರಿಕೆ ಹಾಕಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಪಟ್ಟಣಕ್ಕೆ ಸಾಕಷ್ಟು ಹಣ ನೀಡುವುದಾಗಿ ಮತ್ತು ಮತ ನೀಡದಿದ್ದರೆ ಹಣ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಎನ್ ಸಿಪಿ ಮುಖ್ಯಸ್ಥರಾಗಿರುವ ಅಜಿತ್ ಪವಾರ್ ಅವರು ಶುಕ್ರವಾರ ಬಾರಾಮತಿ ತಹಸಿಲ್ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಗೆ ಪ್ರಚಾರ ಮಾಡುತ್ತಿದ್ದರು.
ಗಮನಾರ್ಹ ವಿಚಾರ ಎಂದರೆ ಅಜಿತ್ ಪವಾರ್ ಅವರು ಬಿಜೆಪಿ-ಎನ್ಸಿಪಿ-ಶಿವಸೇನೆ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಹೊಂದಿದ್ದಾರೆ.
"ನೀವು ಎಲ್ಲಾ 18 ಎನ್ಸಿಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಹಣದ ಕೊರತೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ನೀವು ಎಲ್ಲಾ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ನಾನು ಭರವಸೆ ನೀಡಿದ್ದನ್ನು ನೀಡಲು ಬದ್ಧ. ಆದರೆ ನೀವು ತಿರಸ್ಕರಿಸಿದರೆ, ನಾನು ಸಹ ತಿರಸ್ಕರಿಸುತ್ತೇನೆ. ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ" ಎಂದು ಮಹಾ ಡಿಸಿಎಂ ಹೇಳಿದ್ದಾರೆ.
ಈ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಸೇನೆ-ಯುಬಿಟಿ ನಾಯಕ ಅಂಬಾದಾಸ್ ದಾನ್ವೆ ಅವರು ಪವಾರ್ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
"ಅಜಿತ್ ಪವಾರ್ ಅವರು ತಮ್ಮ ಮನೆಯಿಂದ ಹಣ ನೀಡಲ್ಲ, ಬದಲಾಗಿ ಸಾಮಾನ್ಯ ಜನರು ಪಾವತಿಸುವ ತೆರಿಗೆಯಿಂದ ಹಣ ನೀಡಲಾಗುತ್ತದೆ. ಪವಾರ್ ಅವರಂತಹ ನಾಯಕರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದರೆ, ಚುನಾವಣಾ ಆಯೋಗ ಏನು ಮಾಡುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.
ನಗರ ಪಂಚಾಯತ್ಗಳಿಗೆ ಡಿಸೆಂಬರ್ 2 ರಂದು ಚುನಾವಣೆ ನಿಗದಿಯಾಗಿದೆ.
Advertisement