

ಮುಂಬೈ: ಮಹಾರಾಷ್ಟ್ರ ಸರ್ಕಾರವು ಅಕ್ಟೋಬರ್ 31 ರಿಂದ ನವೆಂಬರ್ 7 ರವರೆಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಾಡು 'ವಂದೇ ಮಾತರಂ' ಅನ್ನು ಸಂಪೂರ್ಣವಾಗಿ ಹಾಡುವಂತೆ ನಿರ್ದೇಶಿಸಿದೆ.
ಶಾಲಾ ಶಿಕ್ಷಣ ಇಲಾಖೆ ಅಕ್ಟೋಬರ್ 27 ರಂದು ಈ ಕುರಿತು ಸುತ್ತೋಲೆ ಹೊರಡಿಸಿದೆ.
ಈ ಕ್ರಮವನ್ನು ಸಮಾಜವಾದಿ ಪಕ್ಷ(ಎಸ್ಪಿ)ದ ನಾಯಕ ಅಬು ಅಜ್ಮಿ ವಿರೋಧಿಸಿದ್ದು, ಅವರು ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ವಿಭಿನ್ನವಾಗಿರುವುದರಿಂದ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದ್ದಾರೆ.
ಆದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಇದಕ್ಕೆ ಕಟುವಾಗಿ ಪ್ರತಿಕ್ರಿಯೆಸಿದ್ದು, ಎಸ್ ಪಿ ಶಾಸಕರು ರಾಷ್ಟ್ರೀಯ ಹಾಡನ್ನು ಗೌರವಿಸದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ತಿರುಗೇಟು ನೀಡಿದೆ.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ವಂದೇ ಮಾತರಂ ಹಾಡು ಅಕ್ಟೋಬರ್ 31ಕ್ಕೆ 150 ವರ್ಷ ಪೂರೈಸುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ರಾಜ್ಯಾದ್ಯಂತದ ಶಾಲೆಗಳಲ್ಲಿ, ಈ ರಾಷ್ಟ್ರೀಯ ಹಾಡಿನ ಮೊದಲ ಎರಡು ಚರಣಗಳನ್ನು ಹಾಡಲಾಗುತ್ತಿದೆ.
ಆದಾಗ್ಯೂ, ಅದರ 150 ವರ್ಷಗಳ ಸಂದರ್ಭದಲ್ಲಿ, ಅಕ್ಟೋಬರ್ 31 ರಿಂದ ನವೆಂಬರ್ 7 ರವರೆಗೆ ಎಲ್ಲಾ ಮಾಧ್ಯಮ ಶಾಲೆಗಳಲ್ಲಿ ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡಬೇಕು ಎಂದು ಸೂಚಿಸಲಾಗಿದೆ.
ಶಾಲೆಗಳು ಹಾಡಿನ ಇತಿಹಾಸವನ್ನು ತಿಳಿಸುವ ಪ್ರದರ್ಶನವನ್ನು ಸಹ ಏರ್ಪಡಿಸಬೇಕು ಎಂದು ಸರ್ಕಾರ ಹೇಳಿದೆ. ಆದರೆ ಪ್ರತಿಯೊಬ್ಬರ ಧಾರ್ಮಿಕ ನಂಬಿಕೆಗಳು ವಿಭಿನ್ನವಾಗಿರುವುದರಿಂದ ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಎಸ್ಪಿ ಶಾಸಕ ಅಜ್ಮಿ ಹೇಳಿದ್ದಾರೆ.
Advertisement