

ನವದೆಹಲಿ: 1984ರ ಸಿಖ್ ವಿರುದ್ಧದ ಹಿಂಸಾಚಾರ ಘಟನೆಯನ್ನು ನೆನಪಿಸಿಕೊಂಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿಂಸಾಚಾರ ಭುಗಿಲೆದ್ದಾಗ ಕಾಂಗ್ರೆಸ್ ನಾಯಕರು ಗುರುದ್ವಾರಗಳ ಹೊರಗೆ ಗುಂಪುಗಳನ್ನು ಮುನ್ನಡೆಸುತ್ತಿರುವುದು ಕಂಡುಬಂದಿತ್ತು ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವರು, 1984 ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಅಸಹಾಯಕ, ಮುಗ್ಧ ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಕಗ್ಗೊಲೆ ಮಾಡಿದ ಆ ದಿನಗಳನ್ನು ನೆನಪಿಸಿಕೊಂಡಾಗ ನನ್ನ ಮೈ ಈಗಲೂ ನಡಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಆಡಳಿತವು ಉದ್ದೇಶಪೂರ್ವಕವಾಗಿಯೇ ಮೌನವಾಗಿತ್ತು.ಗುಂಪುಗಳು ಸಿಖ್ಖರ ಮನೆಗಳು ಮತ್ತು ಗುರುದ್ವಾರಗಳನ್ನು ಲೂಟಿ ಮಾಡಿ ಸುಟ್ಟುಹಾಕಿದಾಗ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು ಎಂದು ಆರೋಪಿಸಿದ್ದಾರೆ. 1984 ರ ಹಿಂಸಾಚಾರದ ಸಮಯದಲ್ಲಿ, ಅವರನ್ನು ಜಿನೀವಾದಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ದೆಹಲಿಯಲ್ಲಿ ತಮ್ಮ ಹೆತ್ತವರ ಸುರಕ್ಷತೆಯ ಬಗ್ಗೆ ಭಯಪಟ್ಟಿದ್ದರು ಎಂದು ಪುರಿ ಹೇಳಿದ್ದಾರೆ.
ನನ್ನ ಹೆತ್ತವರು ಹೌಜ್ ಖಾಸ್ನಲ್ಲಿ ವಾಸಿಸುತ್ತಿದ್ದರು. ದೆಹಲಿ ಮತ್ತಿತರ ಕಡೆಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದರೂ ಸಹ, ಹಿಂದೂ ಸ್ನೇಹಿತನೊಬ್ಬ ಸಕಾಲದಲ್ಲಿ ನನ್ನನ್ನು ರಕ್ಷಿಸಿದ್ದ, ನನ್ನ ಕುಟುಂಬವನ್ನು ಸುರಕ್ಷಿತವಾಗಿ ಕರೆದೊಯ್ದಿದ್ದ. ಇಂದು ಭಾರತವು ತನ್ನ ಅಲ್ಪಸಂಖ್ಯಾತರನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ, ಪೂರ್ವಾಗ್ರಹ ಅಥವಾ ತಾರತಮ್ಯವಿಲ್ಲದೆ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಖಚಿತಪಡಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
Advertisement