

ಮುಂಬೈ: ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಶುಕ್ರವಾರ ತಮಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಮತ್ತು ಜನರೊಂದಿಗೆ ಬೆರೆಯದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ರಾವತ್, ಮುಂದಿನ ವರ್ಷದ ವೇಳೆಗೆ ತಾವು ಸಂಪೂರ್ಣ ಗುಣಮುಖರಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ನೀವೆಲ್ಲರೂ ನನ್ನನ್ನು ಪ್ರೀತಿಸಿದ್ದೀರಿ ಮತ್ತು ನಂಬಿದ್ದೀರಿ. ಆದರೆ ನನಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಈ ಸಮಸ್ಯೆಯಿಂದ ಹೊರಬರುತ್ತೇನೆ. ವೈದ್ಯಕೀಯ ಸಲಹೆಯ ಪ್ರಕಾರ, ಸಾರ್ವಜನಿಕವಾಗಿ ಹೊರಗೆ ಹೋಗಬಾರದು ಅಥವಾ ಜನರೊಂದಿಗೆ ಬೆರೆಯಬಾರದು ಎಂದು ನನಗೆ ಸೂಚಿಸಲಾದೆ" ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಡಳಿತಾರೂಢ ಬಿಜೆಪಿಯ ಕಟು ಟೀಕಾಕಾರ ಮತ್ತು ಮಹಾರಾಷ್ಟ್ರ ವಿರೋಧ ಪಕ್ಷದ ಧ್ವನಿಯಾಗಿರುವ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು, ತಮ್ಮ ದೈನಂದಿನ ಮಾಧ್ಯಮ ಸಂವಾದಗಳಿಗೆ ಹೆಸರುವಾಸಿಯಾಗಿದ್ದಾರೆ.
ನವೆಂಬರ್ 1 ರಂದು ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆಯಲ್ಲಿ ರಾವತ್ ಭಾಗವಹಿಸುವ ನಿರೀಕ್ಷೆಯಿತ್ತು.
Advertisement