
ಮುಂಬೈ: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರಿಗೆ ಬುಧವಾರ ಬೆಳಗ್ಗೆವರೆಗೆ ಮುಂಬೈನ ಆಜಾದ್ ಮೈದಾನದ ಪ್ರತಿಭಟನಾ ಸ್ಥಳದಲ್ಲಿಯೇ ಇರಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಮನೋಜ್ ಜಾರಂಗೆ ಅವರು ನಾಳೆ ಬೆಳಗ್ಗೆವರೆಗೆ ಆಜಾದ್ ಮೈದಾನದಲ್ಲಿ ಉಳಿಯಲು ಸಮಯ ನೀಡುವಂತೆ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದರು. ಜಾರಂಗೆ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ನಾಳೆ ಬೆಳಗ್ಗೆಯವರೆಗೆ ಪ್ರತಿಭಟನಾ ಸ್ಥಳದಲ್ಲಿ ಉಳಿಯಲು ಅನುಮತಿ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಇದೇ ವೇಳೆ ತಮ್ಮ ಬೆಂಬಲಿಗರಲ್ಲಿ ಹೆಚ್ಚಿನವರು ಇಂದೇ ಮುಂಬೈ ತೊರೆದಿದ್ದಾರೆ ಅಥವಾ ಹೊರಡಲಿದ್ದಾರೆ ಎಂದು ಜಾರಂಗೆ ಅವರು ಹೈಕೋರ್ಟ್ಗೆ ಭರವಸೆ ನೀಡಿದ್ದಾರೆ.
ಮರಾಠಾ ಮೀಸಲಾತಿ ಚಳವಳಿಯ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮಹಾರಾಷ್ಟ್ರ ಸರ್ಕಾರ ಭರವಸೆ ನೀಡಿದೆ ಎಂದು ಜಾರಂಗೆ ಹೇಳಿದ್ದಾರೆ.
ಮನೋಜ್ ಜಾರಂಗೆ ಪರ ಹಾಜರಿದ್ದ ವಕೀಲ ಸತೀಶ್ ಮಾನೇಶಿಂಡೆ ಅವರು ತಮ್ಮ ಬೆಂಬಲಿಗರಿಗೆ ಯಾವುದೇ ಸಂಚಾರ ಸಮಸ್ಯೆಗಳನ್ನು ಸೃಷ್ಟಿಸಬೇಡಿ ಮತ್ತು 5,000 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸೇರಬೇಡಿ ಎಂದು ಮನವಿ ಮಾಡಲಾಗಿದೆ ಎಂದು ಕೋರ್ಟ್ ಗೆ ತಿಳಿಸಿದರು.
ಇಂದು ಬೆಳಗ್ಗೆ, ಮುಂಬೈ ಪೊಲೀಸರು ನೋಟಿಸ್ ನೀಡಿ, ಮರಾಠಾ ಮೀಸಲಾತಿ ಹೋರಾಟ ಮುಂದುವರಿಸಲು ಅನುಮತಿ ನಿರಾಕರಿಸಿದ್ದರು ಮತ್ತು ಪ್ರತಿಭಟನಾಕಾರರು ಆಜಾದ್ ಮೈದಾನವನ್ನು ಖಾಲಿ ಮಾಡುವಂತೆ ಆದೇಶಿಸಿದ್ದರು. ಬಾಂಬೆ ಹೈಕೋರ್ಟ್ ಮತ್ತು ಪೊಲೀಸರು ಪ್ರತಿಭಟನೆ ನಡೆಸಲು ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
Advertisement