'ಮತಗಳ್ಳತನ' ವಿಷಯದಲ್ಲಿ ಚುನಾವಣಾ ಆಯೋಗ ನಿರ್ಣಾಯಕ ಮಾಹಿತಿಯನ್ನು ಮರೆಮಾಚಿದೆ: ಮಲ್ಲಿಕಾರ್ಜುನ ಖರ್ಗೆ

ಈ ಆರೋಪಗಳ ಕುರಿತು ಚುನಾವಣಾ ಆಯೋಗದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲವಾದರೂ, ಚುನಾವಣಾ ಸಂಸ್ಥೆಯು ಕಾಂಗ್ರೆಸ್‌ನ ಎಲ್ಲ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದೆ.
Congress president Mallikarjun Kharge
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಚುನಾವಣಾ ಆಯೋಗವು 'ನಿರ್ಣಾಯಕ ಮಾಹಿತಿಯನ್ನು ಮರೆಮಾಡಿದೆ' ಮತ್ತು ಅದು 'ವೋಟ್ ಚೋರಿ'ಯಲ್ಲಿ ಭಾಗಿಯಾಗಿರುವ ಜನರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಕಲು ಮಾಡಿದ ಫಾರ್ಮ್ 7 ಅನ್ನು ಬಳಸಿಕೊಂಡು 5,994 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಪ್ರಯತ್ನಕ್ಕೆ ಸಂಬಧಿಸಿದ ಮತ್ತು ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ಮಾಹಿತಿಯನ್ನು ಚುನಾವಣಾ ಆಯೋಗ ಇನ್ನೂ ಹಂಚಿಕೊಳ್ಳದ ಕಾರಣ ಸದ್ಯ ಪ್ರಕರಣ ತಣ್ಣಗಾಗಿದೆ ಎಂದು ಹೇಳಲಾದ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

ಈ ಆರೋಪಗಳ ಕುರಿತು ಚುನಾವಣಾ ಆಯೋಗದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲವಾದರೂ, ಚುನಾವಣಾ ಸಂಸ್ಥೆಯು ಕಾಂಗ್ರೆಸ್‌ನ ಎಲ್ಲ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದೆ.

ಭಾರತೀಯ ಚುನಾವಣಾ ಆಯೋಗ (ECI) ಈಗ 'ವೋಟ್ ಚೋರಿ'ಗೆ ಬಿಜೆಪಿಯ ಬ್ಯಾಕ್-ಆಫೀಸ್ ಆಗಿದೆಯೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ಕಾಲಗಣನೆಯನ್ನು ಅರ್ಥಮಾಡಿಕೊಳ್ಳಿ. ಮೇ 2023ರ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ, ಆಳಂದ ಕ್ಷೇತ್ರದಲ್ಲಿನ ಮತದಾರರ ಬೃಹತ್ ಅಳಿಸುವಿಕೆಯನ್ನು ಕಾಂಗ್ರೆಸ್ ಬಹಿರಂಗಪಡಿಸಿತ್ತು. ಫಾರ್ಮ್ 7 ಅರ್ಜಿಗಳನ್ನು ನಕಲು ಮಾಡುವ ಅತ್ಯಂತ ಅತ್ಯಾಧುನಿಕ ಕಾರ್ಯಾಚರಣೆಯ ಮೂಲಕ ಸಾವಿರಾರು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು' ಎಂದು ಅವರು ಆರೋಪಿಸಿದರು.

'2023ರ ಫೆಬ್ರವರಿಯಲ್ಲಿ, ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ 5,994 ನಕಲಿ ಅರ್ಜಿಗಳು ಪತ್ತೆಯಾಗಿವೆ. ಮತದಾರರಿಗೆ ವಂಚನೆ ಮಾಡುವ ಬೃಹತ್ ಪ್ರಯತ್ನದ ಸ್ಪಷ್ಟ ಪುರಾವೆ ಅದಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರವು ಅಪರಾಧಿಗಳನ್ನು ಹಿಡಿಯಲು ಸಿಐಡಿ ತನಿಖೆಗೆ ಆದೇಶಿಸಿತು'

'ಆದರೆ ಇಲ್ಲೊಂದು ಟ್ವಿಸ್ಟ್ ಇದೆ: ಆರಂಭದಲ್ಲಿ ಮತ ಚೋರಿ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುವ ಕೆಲವು ದಾಖಲೆಗಳನ್ನು ಆಯೋಗ ಹಂಚಿಕೊಂಡಿತ್ತು. ಆದರೆ ಈಗ, ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಲು ಅಗತ್ಯವಾದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮರೆಮಾಚಿದೆ. ವೋಟ್ ಚೋರಿಯ ಹಿಂದೆ ಇರುವವರನ್ನು ರಕ್ಷಿಸುತ್ತಿದೆ!. ಇಸಿಐ ಇದ್ದಕ್ಕಿದ್ದಂತೆ ಪ್ರಮುಖ ಸಾಕ್ಷ್ಯಗಳನ್ನು ಏಕೆ ಮರೆಮಾಚಿದೆ' ಎಂದು ಖರ್ಗೆ ಪ್ರಶ್ನಿಸಿದರು.

'ಇದು ಯಾರನ್ನು ರಕ್ಷಿಸುತ್ತಿದೆ? ಇದು ಬಿಜೆಪಿಯ ವೋಟ್ ಚೋರಿ ಇಲಾಖೆ ಆಗಿದೆಯೇ? ಸಿಐಡಿ ತನಿಖೆಯನ್ನು ಹಳಿತಪ್ಪಿಸಲು ಬಿಜೆಪಿ ಒತ್ತಡಕ್ಕೆ ಇಸಿಐ ಮಣಿಯುತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ವ್ಯಕ್ತಿಯ ಮತದಾನದ ಹಕ್ಕನ್ನು ರಕ್ಷಿಸಬೇಕಾಗಿದೆ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com