'ನಾನು ಶಿವನ ಭಕ್ತ, ನಿಂದನೆಗಳ 'ವಿಷವನ್ನು ನುಂಗುತ್ತೇನೆ': ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ, ನಮ್ಮ ಪಡೆಗಳು ಆಪರೇಷನ್ ಸಿಂಧೂರವನ್ನ ನಡೆಸಿವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ.
Prime Minister Narendra Modi initiates development projects worth Rs. 6,500 crore in Assam
ಅಸ್ಸಾಂನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.
Updated on

ಗುವಾಹಟಿ: ವಿರೋಧ ಪಕ್ಷ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜನರೇ ನನ್ನ ಯಜಮಾನರು ಮತ್ತು ನಾನು ಅವರ 'ರಿಮೋಟ್ ಕಂಟ್ರೋಲ್' ಆಗಿದ್ದೇನೆ. ತಾನು ಶಿವನ ಭಕ್ತನಾಗಿದ್ದು, ನಿಂದನೆಗಳ 'ವಿಷವನ್ನು ನುಂಗುತ್ತೇನೆ' ಎಂದು ಹೇಳಿದರು.

'ನನಗೆ ಗೊತ್ತು, ಇಡೀ ಕಾಂಗ್ರೆಸ್ ಪರಿಸರ ವ್ಯವಸ್ಥೆಯು ನನ್ನನ್ನು ಗುರಿಯಾಗಿಸಿಕೊಂಡು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತದೆ. ಜನರೇ ನನ್ನ ದೇವರು; ನಾನು ನನ್ನ ನೋವನ್ನು ಅವರ ಮುಂದೆ ವ್ಯಕ್ತಪಡಿಸದಿದ್ದರೆ, ನಾನು ಅದನ್ನು ಮತ್ತೆಲ್ಲಿ ಮಾಡಲಿ? ಅವರು ನನ್ನ ಯಜಮಾನರು, ನನ್ನ ದೇವತೆಗಳು ಮತ್ತು ನಾನು ಅವರ ರಿಮೋಟ್ ಕಂಟ್ರೋಲ್. ನನ್ನ ಬಳಿ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ' ಎಂದು ಅವರು ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ನಂತರ ಅಸ್ಸಾಂನ ದರಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಆರ್‌ಜೆಡಿ-ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ವಿಡಿಯೋ ವೈರಲ್ ಆಗಿತ್ತು. ಘಟನೆ ನಡೆದಾಗ ವಿರೋಧ ಪಕ್ಷಗಳ ಯಾವುದೇ ನಾಯಕರು ವೇದಿಕೆಯಲ್ಲಿ ಇರಲಿಲ್ಲ ಎಂದು ಕಾಂಗ್ರೆಸ್ ಒತ್ತಿ ಹೇಳಿದೆ. ನಂತರ, ಪ್ರಧಾನಿ ಮತ್ತು ಅವರ ತಾಯಿಯನ್ನು ಒಳಗೊಂಡ AI ಆಧಾರಿತ ವಿಡಿಯೋ ರಚಿಸಿದ್ದಕ್ಕಾಗಿ ವಿವಾದ ಭುಗಿಲೆದ್ದಿತು.

'1962ರ ಭಾರತ-ಚೀನಾ ಯುದ್ಧದ ನಂತರ ದೇಶದ ಮೊದಲ ಪ್ರಧಾನಿ (ಜವಾಹರಲಾಲ್ ನೆಹರು) 'ಈಶಾನ್ಯ ಭಾಗದ ಜನರ ಗಾಯಗಳು ಇನ್ನೂ ವಾಸಿಯಾಗಿಲ್ಲ' ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್‌ನ ಸದ್ಯದ ಪೀಳಿಗೆ ಆ ಗಾಯಗಳ ಮೇಲೆ ಉಪ್ಪು ಸವರುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ ಅಸ್ಸಾಂ ಅನ್ನು ಆಳಿತು. ಆದರೆ, 60 ರಿಂದ 65 ವರ್ಷಗಳಲ್ಲಿ ಬ್ರಹ್ಮಪುತ್ರ ನದಿಗೆ ಕೇವಲ ಮೂರು ಸೇತುವೆಗಳನ್ನು ನಿರ್ಮಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ನೀವು ನಮಗೆ ಅವಕಾಶ ನೀಡಿದಾಗ, ನಾವು ಕೇವಲ ಒಂದು ದಶಕದಲ್ಲಿ ಆರು ಹೊಸ ಸೇತುವೆಗಳನ್ನು ನಿರ್ಮಿಸಿದ್ದೇವೆ. ನೀವು ನಮ್ಮ ಪ್ರಯತ್ನಗಳನ್ನು ಮೆಚ್ಚುತ್ತೀರಿ ಮತ್ತು ನಿಮ್ಮ ಬೆಂಬಲದೊಂದಿಗೆ ನಮ್ಮನ್ನು ಆಶೀರ್ವದಿಸುತ್ತೀರಿ ಎಂಬುದು ಸಹಜ' ಎಂದರು.

Prime Minister Narendra Modi initiates development projects worth Rs. 6,500 crore in Assam
'ನನ್ನ ತಾಯಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ': ರಾಹುಲ್, ತೇಜಸ್ವಿ ಯಾದವ್ ವಿರುದ್ಧ ಪ್ರಧಾನಿ ಮೋದಿ ಕಿಡಿ! Video

ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ, ನಮ್ಮ ಪಡೆಗಳು ಆಪರೇಷನ್ ಸಿಂಧೂರವನ್ನ ನಡೆಸಿವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ. ಆದರೆ, ಕಾಂಗ್ರೆಸ್ ಜನರು ಪಾಕಿಸ್ತಾನ ಸೇನೆಯೊಂದಿಗೆ ನಿಂತಿದ್ದಾರೆ. ಅವರು ತಮ್ಮ ಕಾರ್ಯಸೂಚಿಗಳನ್ನು ಮುಂದಿಡುತ್ತಾರೆ. ಪಾಕಿಸ್ತಾನದ ಸುಳ್ಳುಗಳು ಕಾಂಗ್ರೆಸ್‌ನ ಕಾರ್ಯಸೂಚಿಯಾಗುತ್ತವೆ. ಅದಕ್ಕಾಗಿಯೇ ನೀವು ಯಾವಾಗಲೂ ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಬೇಕು' ಎಂದು ಹೇಳಿದರು.

ಕಾಂಗ್ರೆಸ್‌ನ ಅತಿದೊಡ್ಡ ಗಮನ ಮತ ಬ್ಯಾಂಕ್ ಆಗಿದೆ ಮತ್ತು ಅದು ದೇಶದ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ಈಗ ಕಾಂಗ್ರೆಸ್ ರಾಷ್ಟ್ರವಿರೋಧಿಗಳು ಮತ್ತು ಒಳನುಸುಳುವವರ ರಕ್ಷಕನಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅದು ಒಳನುಸುಳುವಿಕೆಯನ್ನು ಪ್ರೋತ್ಸಾಹಿಸಿತು ಮತ್ತು ಈಗ ಒಳನುಸುಳುವವರು ದೇಶದಲ್ಲಿ ಶಾಶ್ವತವಾಗಿ ನೆಲೆಸಿ ಭಾರತದ ಭವಿಷ್ಯವನ್ನು ನಿರ್ಧರಿಸಬೇಕೆಂದು ಅದು ಬಯಸುತ್ತದೆ' ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com