
ಪಾಟ್ನಾ: ಈ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ಡಿಎ) ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬಿಹಾರದ ಬೇಗುಸರಾಯ್ನಲ್ಲಿ ಭಾರತೀಯ ಜನತಾ ಪಕ್ಷದ(ಬಿಜೆಪಿ) ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎನ್ಡಿಎ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲ್ಲುತ್ತದೆ. ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡುವುದಿಲ್ಲ ಎಂದರು.
ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯನ್ನು ಉಲ್ಲೇಖಿಸಿದ ಅಮಿತ್ ಶಾ, ಯಾತ್ರೆಯು ಮುಖ್ಯವಾಗಿ ಬಾಂಗ್ಲಾದೇಶಿ ನುಸುಳುಕೋರರನ್ನು ರಕ್ಷಿಸುವ ಗುರಿ ಹೊಂದಿದೆ ಎಂದು ಆರೋಪಿಸಿದರು.
"ಅವರು(ವಿರೋಧ ಪಕ್ಷಗಳು) ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿಯೊಂದು ಜಿಲ್ಲೆಯು ನುಸುಳುಕೋರರಿಂದ ತುಂಬಿರುತ್ತದೆ" ಎಂದು ಅಮಿತ್ ಶಾ ಎಚ್ಚರಿಸಿದರು.
"ನೀವು ರಾಜ್ಯಾದ್ಯಂತ ಪ್ರಚಾರ ಮಾಡಬೇಕು, ಪ್ರತಿ ಮನೆಗೆ ಭೇಟಿ ನೀಡಿ, ಅವರು ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿಯೊಂದು ಜಿಲ್ಲೆಯು ನುಸುಳುಕೋರರಿಂದ ತುಂಬಿರುತ್ತದೆ ಎಂದು ಜನರಿಗೆ ತಿಳಿಸಬೇಕು" ಎಂದು ಅಮಿತ್ ಶಾ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಸಮಯದಲ್ಲಿ ಚುನಾವಣಾ ಆಯೋಗವು ನುಸುಳುಕೋರರ ಹೆಸರುಗಳನ್ನು ಮಾತ್ರ ಅಳಿಸಿದೆ. ಆದರೆ "ವಿರೋಧ ಪಕ್ಷವು ಎಸ್ಐಆರ್ ವಿಷಯ ಎತ್ತುವ ಮೂಲಕ ಸುಳ್ಳು ನಿರೂಪಣೆ ಮಾಡಲಾಗುತ್ತಿದೆ. ಆದರೆ ನಿಜವಾದ ಮತದಾರರ ಹೆಸರುಗಳನ್ನು ಅಳಿಸಲಾಗಿಲ್ಲ" ಎಂದು ಅವರು ಹೇಳಿದರು.
ಇದೇ ವೇಳೆ ಕೇಂದ್ರ ಗೃಹ ಸಚಿವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮತ್ತು ಬಿಹಾರದಲ್ಲಿ ಎನ್ಡಿಎ ಸರ್ಕಾರಕ್ಕೆ ನೀಡಿದ ಸಹಾಯವನ್ನು ಎತ್ತಿ ತೋರಿಸಿದರು.
Advertisement