
ನವದೆಹಲಿ: ಮತಗಳ್ಳತನ ಎಲ್ಲಿಯವರೆಗೂ ಮುಂದುವರೆಯುತ್ತದೆಯೋ ಅಲ್ಲಿಯವರೆಗೂ ದೇಶದಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ ಸಮಸ್ಯೆ ಹೆಚ್ಟುತ್ತಲೇ ಇರುತ್ತದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ಮ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಯುವಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ. ಈ ಸಮಸ್ಯೆ ನೇರವಾಗಿ ಮತಗಳ್ಳತನಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
ಸರ್ಕಾರವೊಂದು ಸಾರ್ವಜನಿಕ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಾಗ, ಅದರ ಮೊದಲ ಕರ್ತವ್ಯ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ಒದಗಿಸುವುದಾಗಿರುತ್ತದೆ. ಆದರೆ, ಬಿಜೆಪಿ ಪ್ರಾಮಾಣಿಕವಾಗಿ ಚುನಾವಣೆಗಳನ್ನು ಗೆಲ್ಲುವುದಿಲ್ಲ. ಮತಗಳನ್ನು ಕದಿಯುವ ಮೂಲಕ ಮತ್ತು ಕೇಂದ್ರೀಯ ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರದಲ್ಲಿ ಉಳಿಯುತ್ತದೆ. ಹೀಗಾಗಿಯೇ ದೇಶದಲ್ಲಿ ನಿರುದ್ಯೋಗವು 45 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಆರೋಪಿಸಿದ್ದಾರೆ.
ಮತಗಳ್ಳತನದಿಂದ ದೇಶದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಗಳು ಕುಸಿದಿವೆ ಮತ್ತು ಯುವಕರ ಭವಿಷ್ಯವು ಅಪಾಯಕ್ಕೆ ಸಿಲುಕುತ್ತಿದೆ. ದೇಶದ ಪ್ರತಿಯೊಂದು ಪರೀಕ್ಷಾ ಪತ್ರಿಕೆ ಸೋರಿಕೆ ಮತ್ತು ಪ್ರತಿಯೊಂದು ನೇಮಕಾತಿಯು ಭ್ರಷ್ಟಾಚಾರದೊಂದಿಗೆ ಸಂಬಂಧ ಹೊಂದಿದೆ.
ದೇಶದ ಯುವಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಕನಸು ಕಾಣುತ್ತಾರೆ ಮತ್ತು ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಾರೆ. ಆದರೆ, ಪ್ರಧಾನಿ ಮೋದಿ ತಮ್ಮ ಪ್ರಚಾರ ಕುರಿತಂತೆ ಮಾತ್ರ ಯೋಚನೆ ಮಾಡುತ್ತಾರೆ, ಸೆಲೆಬ್ರಿಟಿಗಳು ಹೊಗಳುವಂತೆ ಮಾಡುತ್ತಾರೆ. ಕೋಟ್ಯಾಧಿಪತಿಗಳ ಲಾಭ ಗಳಿಸುವಂತೆ ಮಾಡುತ್ತಾರೆ. ಈ ಮೂಲಕ ಯುವಕರ ಕನಸು ಒಡೆಯುವಂತೆ ಮಾಡುತ್ತಿದ್ದು, ಅವರನ್ನು ನಿರಾಸೆಗೊಳಿಸುವುದೇ ಸರ್ಕಾರ ಗುರುತಾಗಿದೆ.
ಆದರೆ, ದೇಶದಲ್ಲೀಗ ಪರಿಸ್ಥಿತಿ ಬದಲಾಗುತ್ತಿದ್ದು, ನಮ್ಮ ನಿಜವಾದ ಹೋರಾಟ ಉದ್ಯೋಗಗಳಿಗಾಗಿ ಅಷ್ಟೇ ಅಲ್ಲದೆ, ಮತಗಳ್ಳತನದ ವಿರುದ್ಧವಾಗಬೇಕೆಂಬುದನ್ನು ಭಾರತದ ಯುವಕರು ಅರ್ಥಮಾಡಿಕೊಂಡಿದ್ದಾರೆ. ಏಕೆಂದರೆ, ಎಲ್ಲಿಯವರೆಗೂ ಮತಗಳ್ಳತನ ನಡೆಯುತ್ತದೆಯೋ ಅಲ್ಲಿಯವರೆಗೆ ದೇಶದಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ. ನಮ್ಮ ಯುವಕರು ಇನ್ನು ಮುಂದೆ ಉದ್ಯೋಗ ಕಳ್ಳತನ ಅಥವಾ ಮತ ಕಳ್ಳತನವನ್ನು ಸಹಿಸುವುದಿಲ್ಲ. ನಿಜವಾದ ದೇಶಭಕ್ತಿ ಭಾರತವನ್ನು ನಿರುದ್ಯೋಗ ಮತ್ತು ಮತ ಕಳ್ಳತನದಿಂದ ಮುಕ್ತಗೊಳಿಸುವುದರಲ್ಲಿದೆ ಎಂದು ತಿಳಿಸಿದ್ದಾರೆ.
Advertisement