

ನವದೆಹಲಿ: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದ್ದು, ದೆಹಲಿಯ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರ ಪಕ್ಷದ ಹಿರಿಯ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ಬ್ಯಾಂಕ್ ಸ್ಥಿರ ಠೇವಣಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಉತ್ತರ ಮಧ್ಯಪ್ರದೇಶದ ದಾಟಿಯಾ ಸ್ಥಾನದಿಂದ ಮೂರು ಬಾರಿ ಶಾಸಕರಾಗಿದ್ದ ಭಾರ್ತಿ ಅವರನ್ನು ದೋಷಿ ಎಂದು ತೀರ್ಪು ನೀಡಿದ ನಂತರ, ವಿಶೇಷ ನ್ಯಾಯಾಲಯವು 68 ವರ್ಷದ ಕಾಂಗ್ರೆಸ್ ನಾಯಕನನ್ನು ತಿಹಾರ್ ಜೈಲಿಗೆ ಕಳುಹಿಸಿದೆ.
ಭಾರ್ತಿ ಮತ್ತು ಸಹ-ಅಪರಾಧಿ ರಘುವೀರ್ ಶರಣ್ ಪ್ರಜಾಪತಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ.
ನ್ಯಾಯಾಲಯವು, ಭಾರ್ತಿ ಅವರಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಿದರೆ, ಅವರು ಮಧ್ಯಪ್ರದೇಶ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.
1998ಕ್ಕೂ ಮುನ್ನ ಭಾರ್ತಿ ಅವರ ತಾಯಿ ಸಾವಿತ್ರಿ ದೇವಿ ಶ್ಯಾಮ್ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಠೇವಣಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಅವರ ವಿರುದ್ಧ ಐಪಿಸಿಯ ಸೆಕ್ಷನ್ 420, 467, 468, 471, 409 ಮತ್ತು 120B ಅಡಿಯಲ್ಲಿ ನಕಲಿ ದಾಖಲೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಸಲಾಗಿದೆ.
Advertisement