ದೇಶದಲ್ಲೇ ಮೊದಲ ಬಾರಿಗೆ ಡ್ರಗ್ಸ್, ಸಾಮಾಜಿಕ–ಆರ್ಥಿಕ ಜನಗಣತಿ ಆರಂಭಿಸಿದ ಪಂಜಾಬ್: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

ರಾಜ್ಯದಲ್ಲಿ ಬಳಸಲಾಗುತ್ತಿರುವ ನಿರ್ದಿಷ್ಟ ಮಾದಕ ಪದಾರ್ಥಗಳನ್ನು ಗುರುತಿಸಲು ಹಾಗೂ ಉದ್ಯೋಗ, ಬಡತನ ಮತ್ತು ಶಿಕ್ಷಣದ ಮಟ್ಟಗಳಂತಹ ಸಾಮಾಜಿಕ–ಆರ್ಥಿಕ ಅಂಶಗಳ ಮೇಲೆ ಅದರ ಪರಿಣಾಮವನ್ನು ವಿಶ್ಲೇಷಿಸಲು ಮಾದಕ ವಸ್ತು...
Punjab CM Bhagwant Mann
ಮುಖ್ಯಮಂತ್ರಿ ಭಗವಂತ್ ಮಾನ್ online desk
Updated on

ಚಂಡೀಗಢ: ಬುಧವಾರ ಪಂಜಾಬ್ ಸರ್ಕಾರ ರಾಜ್ಯದಲ್ಲಿ ಮಾದಕ ವಸ್ತು ದುರುಪಯೋಗದ ಪ್ರಮಾಣವನ್ನು ಅಳೆಯಲು ಸಮೀಕ್ಷೆಯನ್ನು ಪ್ರಾರಂಭಿಸಿದೆ.

ರಾಜ್ಯದಲ್ಲಿ ಬಳಸಲಾಗುತ್ತಿರುವ ನಿರ್ದಿಷ್ಟ ಮಾದಕ ಪದಾರ್ಥಗಳನ್ನು ಗುರುತಿಸಲು ಹಾಗೂ ಉದ್ಯೋಗ, ಬಡತನ ಮತ್ತು ಶಿಕ್ಷಣದ ಮಟ್ಟಗಳಂತಹ ಸಾಮಾಜಿಕ–ಆರ್ಥಿಕ ಅಂಶಗಳ ಮೇಲೆ ಅದರ ಪರಿಣಾಮವನ್ನು ವಿಶ್ಲೇಷಿಸಲು ಮಾದಕ ವಸ್ತು ಮತ್ತು ಸಾಮಾಜಿಕ–ಆರ್ಥಿಕ ಜನಗಣತಿ ಉದ್ದೇಶಿಸಿದೆ.

ಮೂರು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಈ ಅಭಿಯಾನದಲ್ಲಿ 28,000ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಲಿದ್ದು, ಅವರು ರಾಜ್ಯದ 65 ಲಕ್ಷ ಕುಟುಂಬಗಳ ಸಮೀಕ್ಷೆಯನ್ನು ನಡೆಸಲಿದ್ದಾರೆ. ಮನೆಮಟ್ಟದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ, ಕಾನೂನು ಜಾರಿಯ ಮೇಲಿನ ಒತ್ತಡವನ್ನು ದೂರ ಮಾಡಿ, ನಿಖರ ಪುನರ್ವಸತಿ ಕ್ರಮಗಳತ್ತ ಗಮನ ಹರಿಸುವ ‘ವೈಜ್ಞಾನಿಕ’ ತಂತ್ರವನ್ನು ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿರುವ ಈ ಮಾದಕ ವಸ್ತು ಮತ್ತು ಸಾಮಾಜಿಕ–ಆರ್ಥಿಕ ಜನಗಣತಿ, ಸಮಾನತೆ ಆಧಾರಿತ ಮತ್ತು ಗುರಿನಿರ್ದಿಷ್ಟ ನೀತಿನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು. “ಮೊದಲು ಮಾದಕ ವಸ್ತು ಸಮಸ್ಯೆಯನ್ನು ಆಳವಾಗಿ ಅರ್ಥಮಾಡಿಕೊಂಡು, ನಂತರ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವ ಗುರಿನಿರ್ದಿಷ್ಟ ನೀತಿಗಳನ್ನು ರೂಪಿಸುವುದೇ ನಮ್ಮ ಉದ್ದೇಶ” ಎಂದು ಅವರು ಹೇಳಿದರು.

ಎಲ್ಲಾ ಸಮುದಾಯಗಳ ಜೀವನಮಟ್ಟವನ್ನು ಮೌಲ್ಯಮಾಪನ ಮಾಡುವುದು ಈ ಚಟುವಟಿಕೆಯ ಉದ್ದೇಶವಾಗಿದ್ದು, ಸಂಪೂರ್ಣ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಹೇಳಿದರು. ಜನಗಣತಿಯಲ್ಲಿ ಸಂಗ್ರಹವಾಗುವ ಮಾಹಿತಿಯು ಮಾದಕ ವಸ್ತು ವ್ಯಸನಿಗಳ ಪುನರ್ವಸತಿ ನೀತಿಯನ್ನು ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ಸರ್ಕಾರದ ಒತ್ತು ಮುಖ್ಯವಾಗಿ ಕಾನೂನು ಜಾರಿಯ ಮೇಲಷ್ಟೇ ಇತ್ತು; ಈ ಸಮೀಕ್ಷೆ ಮಾದಕ ವ್ಯಸನಿಗಳ ಪುನರ್ವಸತಿಗೆ ಮುಖಮಾಡುವ ಬದಲಾವಣೆಯ ಸಂಕೇತವಾಗಿದೆ. ರಾಜ್ಯದಲ್ಲಿ ಮಾದಕ ವಸ್ತು ದುರುಪಯೋಗದ ವ್ಯಾಪ್ತಿ ಎಷ್ಟಿದೆ ಎಂಬುದಷ್ಟೇ ಅಲ್ಲ, ವ್ಯಸನಿಗಳು ಬಳಸುವ ವಸ್ತುಗಳ ಪ್ರಕಾರ, ಅವರ ವಯಸ್ಸು, ಶಿಕ್ಷಣದ ಮಟ್ಟ ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ನಿರೀಕ್ಷೆಯಲ್ಲಿದೆ ಸರ್ಕಾರ. 11 ಗ್ರಾಮಗಳಲ್ಲಿ ಈಗಾಗಲೇ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾದಕ ವಸ್ತುಗಳ ಕಾಟವನ್ನು ನಿರ್ಮೂಲಗೊಳಿಸಲು ಇದು ಸಹಕಾರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಜನರು ಮಾಹಿತಿ ಹಂಚಿಕೊಳ್ಳುವಲ್ಲಿ ಬಹಳ ಮುಕ್ತವಾಗಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Punjab CM Bhagwant Mann
ಚಂಡೀಗಢ: ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಭಾರೀ ಸ್ಫೋಟದ ಸದ್ದು

“ಸಾಮಾಜಿಕ ಕಳಂಕದ ಕಾರಣದಿಂದಾಗಿ ಕುಟುಂಬಗಳು ಮುಕ್ತವಾಗಿ ಮುಂದೆ ಬರಲಾರರೇನೋ ಎಂಬ ಆತಂಕದಿಂದ ಮೊದಲು ಡಿಪ್‌ಸ್ಟಿಕ್ ಪರೀಕ್ಷೆ ನಡೆಸಲಾಯಿತು. ಆದರೆ, ಅವರು ಈ ಕಾಟದಿಂದ ಅಷ್ಟು ಬೇಸತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ; ಯಾರೇ ಅವರ ಬಳಿಗೆ ಬರುತ್ತಾರೋ, ಅವರನ್ನು ದೇವರು ಕಳುಹಿಸಿದ ಅವಕಾಶವೆಂದು ಕಂಡು ಸಹಾಯ ಬಯಸುತ್ತಿದ್ದಾರೆ,” ಎಂದು ಒಬ್ಬ ಅಧಿಕಾರಿ ಹೇಳಿದರು.

2025-26ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ, 2026-27ರ ಹಣಕಾಸು ವರ್ಷದ ಜನಗಣತಿ ಮತ್ತು ಸಂಬಂಧಿತ ವ್ಯಸನಮುಕ್ತಿ ಕ್ರಮಗಳಿಗಾಗಿ ರಾಜ್ಯವು 150 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಕಾರ್ಯಾಚರಣೆಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಇದು ಮನೆಮನೆಗೆ ಸಮೀಕ್ಷೆ ನಡೆಸಲು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಿದೆ. ಶಾಲಾ ಶಿಕ್ಷಕರು, ಕಂಪ್ಯೂಟರ್ ಉಪನ್ಯಾಸಕರನ್ನು ಒಳಗೊಂಡಂತೆ, ಗಣಕಾಧಿಕಾರಿಗಳಾಗಿ ನಿಯೋಜಿಸಲ್ಪಡಲಿದ್ದಾರೆ. ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಕಾಟ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ.

ಇದಕ್ಕೂ ಮೊದಲು ಪಂಜಾಬ್ ಓಪಿಯಾಯ್ಡ್ ಡಿಪೆಂಡೆನ್ಸ್ ಸರ್ವೇ ಹಾಗೂ ಚಂಡೀಗಢದ ಪೋಸ್ಟ್‌ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ನಡೆಸಿದ ಅಧ್ಯಯನಗಳಂತಹ ಹಲವು ಸಮೀಕ್ಷೆಗಳು ನಡೆದಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ಯಾವುದೋ ಒಂದು ರೂಪದಲ್ಲಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅವು ಅಂದಾಜಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com