

ಸೂತಿ/ಸಾಗರ್ದಿಘಿ: ಮಾಲ್ಡಾದಲ್ಲಿ ನ್ಯಾಯಾಧೀಶರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳದಲ್ಲಿ ಅಶಾಂತಿಯನ್ನು ಹುಟ್ಟುಹಾಕಲು ಮತ್ತು ಅಂತಿಮವಾಗಿ ವಿಧಾನಸಭಾ ಚುನಾವಣೆಗೆ ಮುನ್ನ ರಾಷ್ಟ್ರಪತಿ ಆಡಳಿತಕ್ಕೆ ದಾರಿ ಮಾಡಿಕೊಡಲು "ಪಿತೂರಿ" ನಡೆಸಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ಮತ್ತು ಸುತಿಯಲ್ಲಿ ನಡೆದ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಬಿಜೆಪಿಯ ಗಲಭೆಯ ಬಲೆಗೆ" ಬೀಳದಂತೆ ಜನರನ್ನು ಕೇಳಿಕೊಂಡರು. ಚುನಾವಣಾ ಆಯೋಗ ನ್ಯಾಯಾಧೀಶರನ್ನು "ರಕ್ಷಿಸಲು ವಿಫಲವಾಗಿದೆ" ಎಂದು ದೂಷಿಸಿದರು ಮತ್ತು ಚುನಾವಣಾ ಆಯೋಗದ ಹಸ್ತಕ್ಷೇಪದ ನಂತರ ಆಡಳಿತಾತ್ಮಕ ಅಧಿಕಾರವನ್ನು ಕಸಿದುಕೊಂಡಿದ್ದರೂ ಸಹ ಅವರು ರಾಜಕೀಯವಾಗಿ ಹೋರಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
"ನನ್ನ ಅಧಿಕಾರಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ಇದಕ್ಕೆ ಬಂಗಾಳವನ್ನು ದೂಷಿಸಲಾಗಿದೆ. ಮಾಲ್ಡಾ ಘಟನೆಯ ಬಗ್ಗೆ ಆಡಳಿತದಿಂದ ಯಾರೂ ನನಗೆ ಮಾಹಿತಿ ನೀಡಿಲ್ಲ" ಎಂದು ಅವರು ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿ, ವಿಶೇಷ ಸಮಗ್ರ ಪರಿಷ್ಕರಣೆ(SIR)ಯಲ್ಲಿ ತೊಡಗಿರುವ ಏಳು ನ್ಯಾಯಾಧೀಶರಿಗೆ ಘೇರಾವ್ ಹಾಕಿರುವ ಘಟನೆಯನ್ನು ದೀದಿ ಉಲ್ಲೇಖಿಸಿದರು.
ಸುಪ್ರೀಂ ಕೋರ್ಟ್ನ ಅಭಿಪ್ರಾಯಗಳನ್ನು ಬೆಂಬಲಿಸಿದ ಮಮತಾ ಬ್ಯಾನರ್ಜಿ, "ಸುಪ್ರೀಂ ಕೋರ್ಟ್ ಹಾಗೆ ಹೇಳಿದ್ದು ಸರಿಯಾಗಿಯೇ ಇದೆ" ಎಂದರು.
ಎಸ್ಐಆರ್ ಡ್ರೈವ್ ಸಮಯದಲ್ಲಿ ಮಾಲ್ಡಾ ಜಿಲ್ಲೆಯಲ್ಲಿ ಏಳು ನ್ಯಾಯಾಧೀಶರಿಗೆ "ದುಃಖಕರ" ಘೇರಾವ್ ಮತ್ತು ದಾಳಿಯ ಬಗ್ಗೆ ನಿಷ್ಕ್ರಿಯತೆ ತೋರಿದ್ದಕ್ಕಾಗಿ ಪಶ್ಚಿಮ ಬಂಗಾಳ ಆಡಳಿತವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಮತ್ತು ಸಿಬಿಐ ಅಥವಾ ಎನ್ಐಎಯಿಂದ ಸ್ವತಂತ್ರ ತನಿಖೆಗೆ ಆದೇಶಿಸಿದೆ.
ಘಟನೆಯನ್ನು ಖಂಡಿಸಿದ ಬ್ಯಾನರ್ಜಿ, ಜನರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ "ನ್ಯಾಯಾಧೀಶರು ಅಥವಾ ನ್ಯಾಯಾಂಗ ಅಧಿಕಾರಿಗಳನ್ನು ಯಾರೂ ಮುಟ್ಟಬಾರದು" ಎಂದು ಹೇಳಿದರು ಮತ್ತು ಮಾಲ್ಡಾ ಘಟನೆಯನ್ನು "ಇಡೀ ಬಂಗಾಳವನ್ನು ಕೆಣಕಲು" ಬಳಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement