

ಆಮ್ ಆದ್ಮಿ ಪಕ್ಷ (AAP) ಮೊನ್ನೆ ಗುರುವಾರ ರಾಜ್ಯಸಭೆಯಲ್ಲಿ ಉಪ ನಾಯಕನ ಸ್ಥಾನದಲ್ಲಿದ್ದ ರಾಘವ್ ಚಡ್ಡಾ ಅವರನ್ನು ಬದಲಿಸಿ ಅಶೋಕ್ ಮಿತ್ತಲ್ ಅವರನ್ನು ನೇಮಕ ಮಾಡಿತು. ಇದಾದ ನಂತರ ಹಲವು ವದಂತಿಗಳು ಹಬ್ಬಿದವು. ಈ ಮಹತ್ದದ ಬೆಳವಣಿಗೆಯ ನಂತರ, ಸೌರಭ್ ಭರದ್ವಾಜ್ ಅವರು ರಾಘವ್ ಚಡ್ಡಾ ಸಂಸತ್ತಿನಲ್ಲಿ ಸಾಫ್ಟ್ ಪಿಆರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಗಳ ಹಿನ್ನೆಲೆ ಹಾಗೂ ರಾಘವ್ ಚಡ್ಡಾ ಮತ್ತು ಪಕ್ಷದ ನಡುವೆ ಉಂಟಾದ ಭಿನ್ನಾಭಿಪ್ರಾಯಗಳ ಬಗ್ಗೆ ನೋಡಿದರೆ, ಈ ವೈಷಮ್ಯ ಬಹಳ ಕಾಲದಿಂದಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಸಮಯದಲ್ಲಿ ರಾಘವ್ ಚಡ್ಡಾ ಗೈರಾಗಿದ್ದುದೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಅಂದೇನಾಗಿತ್ತು? ಚಡ್ಡಾ ವಿರುದ್ಧ ಕೇಜ್ರಿವಾಲ್ ಅಸಮಾಧಾನ
2024ರ ಮಾರ್ಚ್ ತಿಂಗಳಲ್ಲಿ, ಲೋಕಸಭೆ ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧನಕ್ಕೊಳಗಾದ ಬಳಿಕ ರಾಘವ್ ಚಡ್ಡಾ ಪಕ್ಷದ ನಾಯಕತ್ವದಿಂದ ದೂರವಾಗಿರುವುದು ಕಂಡುಬರುತ್ತಿತ್ತು. ಆ ಸಮಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ವಿದೇಶದಲ್ಲಿದ್ದ ಅವರು, ಅರವಿಂದ್ ಕೇಜ್ರಿವಾಲ್ ಬಂಧನವಾಗಿ ಸುಮಾರು ಆರು ತಿಂಗಳ ಅವಧಿಯಲ್ಲಿ ಕೂಡ ದೂರವೇ ಉಳಿದರು. ಸೆಪ್ಟೆಂಬರ್ 2024ರಲ್ಲಿ ಅರವಿಂದ್ ಕೇಜ್ರಿವಾಲ್ ಬಿಡುಗಡೆಗೊಂಡ ಕೆಲವು ದಿನಗಳು ಕಳೆದ ನಂತರವಷ್ಟೇ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹಾಗೂ ದೇಶ ಮತ್ತು ಪಕ್ಷಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ, ವಿಶೇಷವಾಗಿ ಗುಜರಾತ್ನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಯ ವಿಷಯದಲ್ಲಿ ಚಡ್ಡಾ ಧ್ವನಿ ಎತ್ತದಿದ್ದಕ್ಕೆ ಪಕ್ಷ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸುವ ನೊಟೀಸ್ ಗೆ ಕೂಡ ರಾಘವ್ ಚಡ್ಡಾ ಸಹಿ ಹಾಕಲಿಲ್ಲ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಕೇಜ್ರಿವಾಲ್ ಬಂಧನದ ಸಮಯದಲ್ಲಿ ಗೈರಾಗಿದ್ದ ವಿಚಾರವನ್ನು ಟೀಕಿಸಿದ ಸೌರಭ್ ಭರದ್ವಾಜ್, ಅವರು ಪಂಜಾಬ್ಗೆ ಸಂಬಂಧಿಸಿದ ವಿಷಯಗಳನ್ನು ಎತ್ತಲಿಲ್ಲ ಮತ್ತು ಅರವಿಂದ್ ಕೇಜ್ರಿವಾಲ್ ಬಂಧನವಾಗಿದ್ದಾಗ ವಿದೇಶದಲ್ಲಿ ಅಡಗಿಕೊಂಡಿದ್ದರು ಎಂದು ಆರೋಪಿಸಿದರು.
ಇದಲ್ಲದೆ, ಮದ್ಯ ಅಕ್ರಮ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ನ್ಯಾಯಾಲಯದಿಂದ ಪರಿಹಾರ ದೊರೆತ ಸಂದರ್ಭದಲ್ಲಿ ಚಡ್ಡಾ ಮೌನವಾಗಿದ್ದದ್ದು ಮತ್ತು ಆ ಸಂಭ್ರಮದ ರ್ಯಾಲಿಯಲ್ಲಿ ಗೈರಾಗಿದ್ದುದೂ ಪ್ರಶ್ನೆಗೆ ಕಾರಣವಾಯಿತು.
ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಲು ಪಕ್ಷದ ಕಚೇರಿಗೆ ಬಂದಾಗಲೂ, ಜಂತರ್ ಮಂತರ್ನಲ್ಲಿ ನಡೆದ ‘ಜನ ಸಭೆ’ಯಲ್ಲೂ ರಾಘವ್ ಚಡ್ಡಾ ಕಾಣಿಸಿಕೊಂಡಿರಲಿಲ್ಲ. ಕಾಲಾಂತರದಲ್ಲಿ ಪಕ್ಷ, ಪಕ್ಷದ ನಾಯಕತ್ವ ಮತ್ತು ರಾಘವ್ ಚಡ್ಡಾ ನಡುವೆ ಅಂತರ ಬೆಳೆಯುತ್ತಾ ಹೋಯಿತು.
ರಾಘವ್ ಚಡ್ಡಾ ಪ್ರತಿಕ್ರಿಯೆ
ರಾಜ್ಯಸಭೆಯಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಪ್ರತಿಕ್ರಿಯಿಸಿದ ರಾಘವ್ ಚಡ್ಡಾ, ನನ್ನನ್ನು ಸೋಲಿಸಲಿಲ್ಲ, ಆದರೆ ಮೌನಗೊಳಿಸಲಾಗಿದೆ” ಎಂದು ಹೇಳಿದರು. Xನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ಸಾಮಾನ್ಯ ಜನರ ಸಮಸ್ಯೆಗಳನ್ನು ಎತ್ತಿದ್ದೇನೆ ಎಂದು ಹೇಳಿದರು.
ಪಕ್ಷವನ್ನು ಟೀಕಿಸಿದ ಅವರು, ಜನರ ಧ್ವನಿಯನ್ನು ಎತ್ತುವುದು ಅಪರಾಧವೇ ಎಂದು ಪ್ರಶ್ನಿಸಿದರು. ರಾಜ್ಯಸಭೆಯಲ್ಲಿ ಮಾತನಾಡದಂತೆ ತಡೆಯಲು ಪಕ್ಷವು ಕಾರ್ಯಾಲಯಕ್ಕೆ ಸೂಚನೆ ನೀಡಿದೆ ಎಂದು ಕೂಡ ಅವರು ಆರೋಪಿಸಿದರು.
Advertisement