

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶ ಮಾಡುವ ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ವಿನೂತನ ಕ್ರಮಕ್ಕೆ ಮುಂದಾಗಿದೆ.
ತಂತಿಬೇಲಿ ಅಳವಡಿಸಲಾಗದ ಇಂಡೋ-ಬಾಂಗ್ಲಾ ಗಡಿಯಲ್ಲಿ ವಿಷಕಾರಿ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿವೆ.
ಹೌದು.. ಭಾರತ-ಬಾಂಗ್ಲಾ ಗಡಿಯಲ್ಲಿ ಒಳನುಸುಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಡೆ ಬೇಲಿಗಳೇ ಇಲ್ಲದ ಕಾರಣ ಇಂತಹ ಗಡಿ ಪ್ರದೇಶಗಳ ಮೂಲಕ ಅಕ್ರಮ ವಲಸಿಗರು ಗಡಿ ದಾಟಿ ಭಾರತದೊಳಗೆ ನುಸುಳುತ್ತಿದ್ದಾರೆ. ಇಂತಹ ನುಸುಳುಕೋರರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಭಾರತೀಯ ಸೇನೆ ವಿನೂತನ ಕ್ರಮಕ್ಕೆ ಮುಂದಾಗಿದೆ.
ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ ಗಡಿಯಲ್ಲಿ ಹಾವುಗಳು ಮತ್ತು ಮೊಸಳಗೆಗಳನ್ನು ನಿಯೋಜಿಸಲು ಬಿಎಸ್ಎಫ್ ಮುಂದಾಗಿದೆ. ಗಡಿಯಲ್ಲಿ ಸುಮಾರು 175 ಕಿ.ಮೀ ಬೇಲಿ ಇಲ್ಲದ ಪ್ರದೇಶದುದ್ದಕ್ಕೂ ಸರೀಸೃಪಗಳನ್ನು ನಿಯೋಜಿಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಭಾರತ ಮತ್ತು ಬಾಂಗ್ಲಾದೇಶದ ಸುಮಾರು 4,096 ಕಿ.ಮೀ. ಗಡಿ ಪ್ರದೇಶಗಳ ಪೈಕಿ 850 ಕಿ.ಮೀ. ಗಡಿಯಲ್ಲಿ ಬೇಲಿಯೇ ಇಲ್ಲ. ಈ 850 ಕಿ.ಮೀ ಗಡಿಯಲ್ಲಿ ಕೆಲವು ಪ್ರದೇಶಗಳಲ್ಲಿ ಬೇಲಿ ನಿರ್ಮಾಣವೇ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ.
ಮೊಸಳೆ ಹಾವುಗಳ ನಿಯೋಜನೆ
ಇಂತಹ ಗಡಿ ಪ್ರದೇಶಗಳಲ್ಲೇ ಭಾರತೀಯ ಸೇನೆ ಇದೀಗ ಮೊಸಳೆ ಮತ್ತು ಹಾವುಗಳನ್ನು ನಿಯೋಜಿಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಉನ್ನತ ಮಟ್ಟದ ಸಭೆಗಳ ನಂತರ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಾಂಗ್ಲಾದೇಶದೊಂದಿಗಿನ 175 ಕಿಲೋಮೀಟರ್ಗಳಷ್ಟು ಬೇಲಿಯಿಲ್ಲದ ನದಿಗಳು ಮತ್ತು ಜೌಗು ಪ್ರದೇಶಗಳಲ್ಲಿ ದಾಟುವಿಕೆಯನ್ನು ತಡೆಯಲು ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಬಹುದು ಎಂದು ಸಲಹೆ ನೀಡಿತ್ತು.
ಮಾತ್ರವಲ್ಲದೇ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಲು ಬಿಎಸ್ಎಫ್ ಆಲೋಚಿಸಿದ್ದು, ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ. ಬಿಎಸ್ಎಫ್ನೊಳಗೆ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಫೆಬ್ರವರಿ 9 ರಂದು ಮಹಾನಿರ್ದೇಶಕ ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಯಿತು. ಮಾರ್ಚ್ 20 ರಂದು ನವದೆಹಲಿಯ ಬಿಎಸ್ಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಮತ್ತೊಂದು ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಇದರ ನಂತರ, ಪೂರ್ವ ಮತ್ತು ಈಶಾನ್ಯ ವಲಯಗಳ ಗಡಿ ಮಟ್ಟದ ಅಧಿಕಾರಿಗಳಿಗೆ ಸಂದೇಶಗಳನ್ನು ಕಳುಹಿಸಲಾಯಿತು.
ಆದಾಗ್ಯೂ ಈ ಪ್ರಸ್ತಾಪವನ್ನು ಎಷ್ಟೇ ಗಂಭೀರವಾಗಿ ಪರಿಗಣಿಸಿದರೂ, ಹಲವಾರು ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ. ಗಡಿಯಲ್ಲಿ ಯಾವ ಭಾಗದಲ್ಲಿ ಅವುಗಳನ್ನು ಬಿಡಲಾಗುತ್ತದೆ ಎನ್ನುವ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.
Advertisement