

ಮಧುರೈ: ಲಾಕ್ ಅಪ್ ಡೆತ್ ಪ್ರಕರಣವೊಂದರಲ್ಲಿ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈ ಜಿಲ್ಲೆಯ ನ್ಯಾಯಾಲಯ ಆದೇಶ ಪ್ರಕಟಿಸಿದೆ.
2020ರ ಜೂನ್ 19ರಂದು, ಲಾಕ್ಡೌನ್ ಸಮಯದಲ್ಲಿ ಅಂಗಡಿ ನಿಗದಿತ ಸಮಯದ ನಂತರವೂ ತೆರೆಯಿಟ್ಟಿದ್ದಾರೆ ಎಂಬ ಆರೋಪದ ಮೇಲೆ, ಮೊಬೈಲ್ ಅಂಗಡಿ ನಡೆಸುತ್ತಿದ್ದ ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಅವರನ್ನು ಬಂಧಿಸಲಾಗಿತ್ತು. ನಂತರ ಈ ಆರೋಪ ಸುಳ್ಳು ಎಂದು ಬಹಿರಂಗವಾಯಿತು. ತೂತುಕೂಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನಿಕ್ಸ್ ಅವರು ಕಸ್ಟಡಿಯಲ್ಲಿ ಮೃತಪಟ್ಟಿದ್ದರು.
ಆರು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆ ದೇಶವ್ಯಾಪಿ ಆಕ್ರೋಶ ಎಬ್ಬಿಸಿತ್ತು. ಈ ಪ್ರಕರಣವನ್ನು ನ್ಯಾಯಾಲಯ ‘ಅಧಿಕಾರದ ದುರುಪಯೋಗದ ಉದಾಹರಣೆ’ ಎಂದು ಹೇಳಿದೆ. ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇದ್ದಾರೆ. ಈ ತೀರ್ಪು ಪೊಲೀಸರಲ್ಲಿ ಭಯ ಹುಟ್ಟಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ತಂದೆ ಮತ್ತು ಮಗನನ್ನು ಬಟ್ಟೆ ಬಿಚ್ಚಿಸಿ ಕ್ರೂರವಾಗಿ ಹಲ್ಲೆ ಮಾಡಲಾಗಿತ್ತು. ಅದನ್ನು ಓದಿದರೆ ಹೃದಯ ನಡುಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 2020ರ ಜೂನ್ 19ರಂದು ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಸತಂಕುಳಂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕೆಲವೇ ದಿನಗಳಲ್ಲಿ ಇಬ್ಬರೂ ಮೃತಪಟ್ಟರು. ಬಂಧಿತರ ಸಂಬಂಧಿಕರು, ಪೊಲೀಸ್ ಠಾಣೆಯಲ್ಲಿ ಇಡೀ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಗುದದ್ವಾರದಿಂದ ರಕ್ತಸ್ರಾವ ಸಂಭವಿಸಿದ್ದೂ ಸೇರಿದಂತೆ ಗಂಭೀರ ದೈಹಿಕ ಹಿಂಸೆಯ ಗುರುತುಗಳನ್ನು ಉಲ್ಲೇಖಿಸಿದ್ದರು.
ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ, ರಾಜ್ಯದ ಸಿಬಿ-ಸಿಐಡಿ ಯಿಂದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದು, ಈ ಪ್ರಕರಣದಲ್ಲಿ 10 ಮಂದಿ ಪೊಲೀಸರನ್ನು ಬಂಧಿಸಿತು. ಬಂಧಿತರಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಉಪನಿರೀಕ್ಷಕರು ಹಾಗೂ ಹಲವಾರು ಕಾನ್ಸ್ಟೇಬಲ್ಗಳು ಸೇರಿದ್ದರು.
ನಂತರ ಸಿಬಿಐ ಆರೋಪಿಗಳ ವಿರುದ್ಧ ಕೊಲೆ ಆರೋಪಗಳನ್ನು ದಾಖಲಿಸಿತು. ತನಿಖೆಯ ವೇಳೆ ಮಹಿಳಾ ಕಾನ್ಸ್ಟೇಬಲ್ ಒಬ್ಬರ ಹೇಳಿಕೆ ಪ್ರಮುಖ ತಿರುವು ತಂದುಕೊಟ್ಟಿತು. ಅವರು, ತಂದೆ-ಮಗನ ಮೇಲೆ ಇಡೀ ರಾತ್ರಿ ಹಲ್ಲೆ ನಡೆದಿದ್ದು, ಠಾಣೆಯ ಮೇಜುಗಳು ಮತ್ತು ಲಾಠಿಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದವು ಎಂದು ತನಿಖಾಧಿಕಾರಿಗಳಿಗೆ ಹೇಳಿದರೆಂದು ವರದಿಯಾಗಿದೆ.
ಸತಂಕುಳಂ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಗಳು ಪ್ರತಿದಿನ ಸ್ವಯಂಚಾಲಿತವಾಗಿ ಅಳಿಸಿಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದರಿಂದ, ಅವುಗಳನ್ನು ಸಂರಕ್ಷಿಸದೇ ಇದ್ದದ್ದು ತನಿಖೆಗೆ ದೊಡ್ಡ ಸವಾಲಾಯಿತು. ಐದು ವರ್ಷಕ್ಕಿಂತ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ 100 ಕ್ಕೂ ಹೆಚ್ಚು ಸಾಕ್ಷಿದಾರರನ್ನು ಪರೀಕ್ಷಿಸಲಾಯಿತು.
Advertisement