

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನದಿಂದ ತೆರವಾದ ಬಾರಮತಿ ವಿಧಾನಸಭಾ ಉಪಚುನಾವಣೆಗೆ ಸುನೇತ್ರಾ ಪವಾರ್ ಸ್ಪರ್ಧಿಸುತ್ತಿದ್ದು, ಪವಾರ್ ಕಾಂಗ್ರೆಸ್ ಬೆಂಬಲವನ್ನೂ ಕೋರಿದ್ದರು.
ಸುನೇತ್ರಾ ಪವಾರ್ ಮನವಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಬೆಂಬಲ ನೀಡಲು ಷರತ್ತು ವಿಧಿಸಿದೆ. ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನ್ನಪ್ಪಿದ ವಿಮಾನ ಅಪಘಾತದ ಕುರಿತು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾದರೆ, ಬರಾಮತಿ ವಿಧಾನಸಭೆ ಉಪಚುನಾವಣೆಯಿಂದ ಹಿಂದೆ ಸರಿಯುವ ವಿಚಾರವನ್ನು ಪರಿಗಣಿಸುವುದಾಗಿ ತಿಳಿಸಿದೆ.
ರಾಜ್ಯ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಕ್ಷದ ಹೇಳಿಕೆಯನ್ನು ಪ್ರಕಟಿಸಿದ್ದು, ಏಪ್ರಿಲ್ 23ರ ಉಪಚುನಾವಣೆ ಸರ್ವಾನುಮತದಿಂದ ನಡೆಯಬೇಕು ಎಂಬ ಹೇಳಿಕೆಗಳನ್ನು ತಳ್ಳಿ ಹಾಕಿ, ಬಿಜೆಪಿ ‘ಸೌಕರ್ಯವಾದಿ’ ರಾಜಕೀಯ ನಿಲುವು ತಾಳಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಭಾನುವಾರ, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ವಿರುದ್ಧ ಬರಾಮತಿ ಉಪಚುನಾವಣೆಗೆ ತನ್ನ ರಾಜ್ಯ ಘಟಕದ ಕಾರ್ಯದರ್ಶಿ ಆಕಾಶ್ ಮೋರೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು.
ಜನವರಿ 28ರಂದು ಕ್ಷೇತ್ರದೊಳಗೆ ನಡೆದ ವಿಮಾನ ಅಪಘಾತದಲ್ಲಿ ಹಾಲಿ ರಾಷ್ತ್ರೀಯವಾದಿ ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಆಗಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದರಿಂದ ಈ ಉಪಚುನಾವಣೆ ನಡೆಯುತ್ತಿದೆ.
ಪುಣೆ ಜಿಲ್ಲೆಯ ಈ ಸ್ಥಾನವನ್ನು ಅಜಿತ್ ಪವಾರ್ ಎಂಟು ಬಾರಿ ಪ್ರತಿನಿಧಿಸಿದ್ದರು; ಅವರು ಕೆಲವು ಗೆಲುವುಗಳನ್ನು ದಾಖಲೆ ಬಹುಮತದ ಅಂತರದಿಂದ ಪಡೆದಿದ್ದರು. ವಿರೋಧ ಪಕ್ಷವಾದ ಎನ್ಸಿಪಿ-ಎಸ್ಪಿ ಮತ್ತು ಶಿವಸೇನೆ-ಯುಬಿಟಿ ಉಪಚುನಾವಣೆಯನ್ನು ಸರ್ವಾನುಮತದಿಂದ ನಡೆಯಲು ಬೆಂಬಲ ಸೂಚಿಸಿದರೂ, ಕಾಂಗ್ರೆಸ್ ಮಾತ್ರ ಸ್ಪರ್ಧೆ ಮುಂದುವರಿಸುವ ನಿಲುವು ತಾಳಿದೆ.
ಲೋಂಧೆ ಅವರ ಹೇಳಿಕೆಯಲ್ಲಿ, ಅಜಿತ್ ಪವಾರ್ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಬರಾಮತಿಯಲ್ಲಿ ಎಫ್ಐಆರ್ ದಾಖಲಾಗಿದೆಯಾದರೆ, ಪಕ್ಷ ಮತ್ತು ಅದರ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸುವುದಾಗಿ ಹೇಳಿದರು. ಅಜಿತ್ ಪವಾರ್ ಅವರ ಸಾವಿನ ಸುತ್ತಮುತ್ತಲಿನ ಪರಿಸ್ಥಿತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕುಟುಂಬದವರು ಈ ಪ್ರಕರಣದ ತನಿಖೆ ಬೇಡಿಕೊಂಡಿರುವುದನ್ನು, ಸುನೆತ್ರಾ ಪವಾರ್ ಸಿಬಿಐ ತನಿಖೆಗಾಗಿ ಮನವಿ ಮಾಡಿರುವುದನ್ನು ಉಲ್ಲೇಖಿಸಿದರು. ಜೊತೆಗೆ, ಎನ್ಸಿಪಿ-ಎಸ್ಪಿ ಶಾಸಕ ರೋಹಿತ್ ಪವಾರ್ ಮಹಾರಾಷ್ಟ್ರದಲ್ಲಿ ಎಫ್ಐಆರ್ ದಾಖಲಿಸಲು ಹಲವು ಬಾರಿ ಪ್ರಯತ್ನಿಸಿದರೂ, ಕೊನೆಗೆ ಕೇವಲ ಕರ್ನಾಟಕದಲ್ಲೇ ಪ್ರಕರಣ ದಾಖಲಾಗುವಂತಾಗಿದೆ ಎಂದು ಅವರು ಸೂಚಿಸಿದರು.
Advertisement