

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಭಾರಿ ಭದ್ರತಾ ಲೋಪ ಕಂಡು ಬಂದಿದ್ದು, ಮಾಸ್ಕ್ ಧರಿಸಿದ್ದ ಅಪರಿಚಿತ ಚಾಲಕನೊಬ್ಬ ಗೇಟ್ ಮೂಲಕ ಕಾರನ್ನು ಸ್ಪೀಕರ್ ಕಚೇರಿಯತ್ತ ಚಲಾಯಿಸುವ ಮೂಲಕ ತೀವ್ರ ಆತಂಕ ಸೃಷ್ಟಿಸಿದ್ದರು.
ಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯ ಗೇಟ್ ನಂ. 2 ರ ಬಳಿ ಬ್ಯಾರಿಕೇಡ್ ಮುರಿದು ಒಳನುಗ್ಗಿದ ಕಾರು ಸ್ಪೀಕರ್ ಕಚೇರಿ ಬಳಿಯೇ ಹೋಗಿದೆ. ಬಳಿಕ ಕಾರಿನಲ್ಲಿದ್ದ ಚಾಲಕ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಾರಿನ ಮೇಲೆ ಮಸಿ ಎರಚಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಈ ಕಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೇಟ್ ಸಂಖ್ಯೆ 2 ಅನ್ನು ಭೇದಿಸಿ ವಿಧಾನಸಭೆ ಆವರಣಕ್ಕೆ ಪ್ರವೇಶಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ವಿಧಾನಸಭೆ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಾರಿನ ಮಾಲೀಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Advertisement