

ಗುವಾಹಟಿ: ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಅಸ್ಸಾಂ ಬಿಜೆಪಿ ಮಂಗಳವಾರ ತಿಳಿಸಿದೆ.
ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಅವರ ಕ್ರಮಗಳು ಸಾಂವಿಧಾನಿಕ ಸ್ವಾತಂತ್ರ್ಯ ಮತ್ತು ಎಲ್ಲಾ ನಂಬಿಕೆಗಳನ್ನು ಸ್ಪಷ್ಟವಾಗಿ ವಿರೋಧಿಸುತ್ತವೆ ಎಂದು ಅಸ್ಸಾಂ ಬಿಜೆಪಿ ವಕ್ತಾರ ಪ್ರಾಂಜಲ್ ಕಲಿತಾ ಹೇಳಿದ್ದಾರೆ.
ಈ ಸಂಬಂಧ ಗುವಾಹಟಿಯ ಬಸಿಸ್ತಾ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ. ಚುನಾವಣಾ ಆಯೋಗದಲ್ಲಿ ಇನ್ನೊಂದು ದೂರು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರ್ಎಸ್ಎಸ್-ಬಿಜೆಪಿಯನ್ನು ನಿಷೇಧಿಸುವಂತೆ ಖರ್ಗೆ ಅವರ ಇತ್ತೀಚಿಗೆ ಹೇಳಿಕೆಯು ರಾಜಕೀಯ ಅಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಅವರ ಬೌದ್ಧಿಕ ದಿವಾಳಿತನವನ್ನು ಸಹ ಬಹಿರಂಗಪಡಿಸುತ್ತದೆ ಎಂದು ಕಲಿತಾ ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 6 ರಂದು ಶ್ರೀಭೂಮಿ ಜಿಲ್ಲೆಯ ನಿಲಂಬಜಾರ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಖರ್ಗೆ RSS, BJP ವಿಷಕಾರಿ ಹಾವುಗಳಂತೆ ಅವುಗಳನ್ನು ಹೊಡೆದು ಕೊಲ್ಲಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ಅಸ್ಸಾಂ ಬಿಜೆಪಿ ಘಟಕ ಬಲವಾಗಿ ಖಂಡಿಸುತ್ತದೆ, ಇದು ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳಿಗೆ ಸಂಪೂರ್ಣ ಅವಮಾನವಾಗಿದೆ. ಇಂತಹ ಹೇಳಿಕೆಗಳು ಖಂಡನೀಯ ಮಾತ್ರವಲ್ಲ, ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯೂ ಹೌದು ಎಂದು ಕಲಿತಾ ಹೇಳಿದ್ದಾರೆ.
ಕಾಂಗ್ರೆಸ್ ರಾಜಕೀಯ ಕಾರಣಕ್ಕಾಗಿ ಇತರ ಧರ್ಮಗಳನ್ನು ವೈಭವೀಕರಿಸುತ್ತಾ 'ಸನಾತನ' ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಪ್ರಯತ್ನಿಸುತ್ತಿದೆ. ಈ ಒಡಕಿನ ವಿಧಾನವನ್ನು ಈಗಾಗಲೇ ಅಸ್ಸಾಂ ಮತ್ತು ರಾಷ್ಟ್ರದ ಜನರು ತಿರಸ್ಕರಿಸಿದ್ದಾರೆ. ಪ್ರಚೋದನಕಾರಿ ಮತ್ತು ಸಮಾಜಘಾತುಕ ಹೇಳಿಕೆ ನೀಡಿದ ಆರೋಪದ ಮೇಲೆ ಖರ್ಗೆ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ ಎಂದು ಅವರು ಹೇಳಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.
Advertisement