

ಭೂಪಾಲ್: ಪ್ರಿಯಕರನ ಜೊತೆ ಸೇರಿ ಮಹಿಳೆ ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಏಪ್ರಿಲ್ 7ರ ತಡರಾತ್ರಿ ಕೊಲೆ ನಡೆದಿದೆ. 28 ವಯಸ್ಸಿನ ಪುರೋಹಿತ್ ದೇವಕೃಷ್ಣ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಅವರ ದೇಹದ ಮೇಲೆ ಹರಿತವಾದ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಗುರುತುಗಳು ಪತ್ತೆಯಾಗಿದ್ದವು.
ದರೋಡೆಕೋರರು ಮನೆಗೆ ನುಗ್ಗಿ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಅದನ್ನು ತಡೆಯಲು ಮುಂದಾದ ನನ್ನ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದರು ಎಂದು ಪತ್ನಿ ಪ್ರಿಯಾಂಕಾ ಕತೆ ಕಟ್ಟಿ ದೂರು ನೀಡಿದ್ದಳು. ಆದರೆ ಪ್ರಿಯಾಂಕಾ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಂತೆ ಪೊಲೀಸರು ಅನುಮಾನ ವ್ಯಕ್ತಪಡಿಸಿದರು.
ದೇವಕೃಷ್ಣ ಅವರ ದಾಂಪತ್ಯ ಬಹಳ ದಿನಗಳಿಂದ ಸಮಸ್ಯೆಗಳಿಂದ ಕೂಡಿತ್ತು. ಪ್ರಿಯಾಂಕಾ ಆಗಾಗ್ಗೆ ನಮ್ಮ ಅಣ್ಣನನ್ನು ಅವಮಾನಿಸುತ್ತಿದ್ದರು. ನೀನು ಕಪ್ಪು ಚರ್ಮದವನು… ನೀವು ನನಗೆ ಅರ್ಹರಲ್ಲ… ನಾನು ನಿನಗಿಂತ ಉತ್ತಮ ವ್ಯಕ್ತಿಯನ್ನು ಪಡೆಯಬಲ್ಲೆ ಎಂದು ಪತಿಯನ್ನು ಹೀಯಾಳಿಸುತ್ತಿಳು ಎಂದು ಮೃತ ಪುರೋಹಿತ್ ಸಹೋದರಿ ಜ್ಯೋತಿ ತಿಳಿಸಿದ್ದಾರೆ.
ಪೊಲೀಸ್ ತನಿಖೆಗಳ ಪ್ರಕಾರ, ಪ್ರಿಯಾಂಕಾ ರಾಜ್ಗಢದ ನಿವಾಸಿ 32 ವರ್ಷದ ಕಮಲೇಶ್ ಪುರೋಹಿತ್ ಜೊತೆ ಸಂಬಂಧ ಹೊಂದಿದ್ದಳು. ಮೊಬೈಲ್ ಫೋನ್ ಡೇಟಾ ಸೇರಿದಂತೆ ತಾಂತ್ರಿಕ ಪುರಾವೆಗಳು ಕಮಲೇಶ್ ಜೊತೆಗಿನ ಅವಳ ಸಂಪರ್ಕ ಮತ್ತು ಕೊಲೆಯ ಸಮಯದಲ್ಲಿ ನಡೆದ ಕರೆಗಳ ವಿವರ ಮತ್ತಷ್ಟು ವಿಷಯವನ್ನು ಬಹಿರಂಗಪಡಿಸಿದವು. ನಿರಂತರ ವಿಚಾರಣೆಯ ನಂತರ, ಪ್ರಿಯಾಂಕಾ ಅಂತಿಮವಾಗಿ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.
ಕಮಲೇಶ್ ತನ್ನ ಸಹಚರ ಸುರೇಂದ್ರ ಭಾಟಿಯನ್ನು ಸಂಪರ್ಕಿಸಿ, ದೇವಕೃಷ್ಣನನ್ನು ಕೊಲ್ಲಲು 1 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 50,000 ರೂ. ನೀಡಿದ್ದ. ಕೊಲೆಯಾದ ರಾತ್ರಿ ಮನೆಯ ಬಾಗಿಲನ್ನು ಉದ್ದೇಶಪೂರ್ವಕವಾಗಿ ಬೀಗ ಹಾಕದೆ ಬಿಡಲಾಗಿತ್ತು. ಸುರೇಂದ್ರ ಒಳಗೆ ಬಂದು ಮಲಗಿದ್ದ ದೇವಕೃಷ್ಣ ಮೇಲೆ ಹಲ್ಲೆ ಮಾಡಿದ್ದ.
ಅಪರಾಧವನ್ನು ದರೋಡೆಯಂತೆ ಬಿಂಬಿಸಲು, ಕೊಠಡಿಯನ್ನು ದೋಚಿದರು. ಬೆಲೆಬಾಳುವ ವಸ್ತುಗಳನ್ನು ಕಾಣೆಯಾಗಿದೆ ಎಂದು ಕಥೆ ಕಟ್ಟಿದರು. ಮನೆಯಲ್ಲಿ ಶೋಧ ನಡೆಸಿದಾಗ ಕಳ್ಳತನವಾಗಿವೆ ಎಂದು ಹೇಳಿಕೊಂಡಿದ್ದ ಆಭರಣಗಳು ಪತ್ತೆಯಾಗಿವೆ. ಪ್ರಿಯಾಂಕಾ ಮತ್ತು ಕಮಲೇಶ್ ಪುರೋಹಿತ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆದರೆ, ಆಪಾದಿತ ಸುಪಾರಿ ಹಂತಕ ಸುರೇಂದ್ರ ಭಾಟಿ ತಲೆಮರೆಸಿಕೊಂಡಿದ್ದಾನೆ.
Advertisement