ಲೋಕಸಭೆಯ ಸ್ಥಾನಗಳು 850ಕ್ಕೆ ಏರಿಕೆಯಿಂದ ಏನು ಲಾಭ?: ಅಮಿತ್ ಶಾ ಹೇಳಿದ್ದಿಷ್ಟು...

2011ರ ಜನಗಣತಿ ಆಧಾರಿತ ಜನಸಂಖ್ಯೆ ಪ್ರಮಾಣವನ್ನು ಆಧಾರ ಮಾಡಿಕೊಂಡು ಕ್ಷೇತ್ರ ಮರುಹಂಚಿಕೆ ಮಾಡಿದರೆ, ದಕ್ಷಿಣ ರಾಜ್ಯಗಳ ಪ್ರಭಾವ ಸಂಸತ್ತಿನಲ್ಲಿ ಕುಗ್ಗಿ, ಹಿಂದಿ ಹೃದಯಭೂಮಿ ನಿರ್ಧಾರಾತ್ಮಕ ಸ್ಥಾನಕ್ಕೇರುತ್ತದೆ
Amit Shah
ಅಮಿತ್ ಶಾPTI
Updated on

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಕುರಿತ ಚರ್ಚೆಯ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ಷೇತ್ರ ಮರುಹಂಚಿಕೆ (ಡಿಲಿಮಿಟೇಶನ್) ಬಗ್ಗೆ ದಕ್ಷಿಣ ರಾಜ್ಯಗಳು ತಪ್ಪು ಕಲ್ಪನೆ ಹರಡಿಸುತ್ತಿವೆ ಎಂದು ಆರೋಪಿಸಿ, ಮರುಹಂಚಿಕೆಯ ನಂತರ ದಕ್ಷಿಣಕ್ಕೂ ಲಾಭವಾಗುತ್ತದೆ ಎಂಬುದನ್ನು ತೋರಿಸುವ ಅಂಕಿ-ಅಂಶಗಳನ್ನು ಮಂಡಿಸಿದರು.

ಇಂದು ಮಂಡಿಸಲಾದ ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ವಿರೋಧ ಪಕ್ಷಗಳು ಕಠಿಣವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಮಹಿಳಾ ಮೀಸಲಾತಿಗೆ ತಾವು ವಿರೋಧಿಗಳಲ್ಲವಾದರೂ, ಅದನ್ನು ಕ್ಷೇತ್ರ ಮರುಹಂಚಿಕೆಗೆ ತಳುಕು ಹಾಕಿರುವ ಸರ್ಕಾರದ ಕ್ರಮ 2029ರ ಲೋಕಸಭೆ ಚುನಾವಣೆಯಲ್ಲಿ ತನ್ನ ಲಾಭಕ್ಕಾಗಿ ಕ್ಷೇತ್ರಗಳ ಗೆರಿಮ್ಯಾಂಡರಿಂಗ್ (ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಅನ್ಯಾಯದ ಅನುಕೂಲವನ್ನು ನೀಡುವ ಸಲುವಾಗಿ ಮತದಾನಕ್ಕಾಗಿ ಪ್ರದೇಶದ ಗಾತ್ರ ಮತ್ತು ಗಡಿಗಳನ್ನು ಬದಲಾಯಿಸುವುದು) ಮಾಡಲು ರೂಪಿಸಿದ ಅವಕಾಶವಾದಿ ಯೋಜನೆ ಎಂದು ಆರೋಪಿಸುತ್ತಿವೆ.

2011ರ ಜನಗಣತಿ ಆಧಾರಿತ ಜನಸಂಖ್ಯೆ ಪ್ರಮಾಣವನ್ನು ಆಧಾರ ಮಾಡಿಕೊಂಡು ಕ್ಷೇತ್ರ ಮರುಹಂಚಿಕೆ ಮಾಡಿದರೆ, ದಕ್ಷಿಣ ರಾಜ್ಯಗಳ ಪ್ರಭಾವ ಸಂಸತ್ತಿನಲ್ಲಿ ಕುಗ್ಗಿ, ಭಾರತದ ಉತ್ತರದ ರಾಜ್ಯಗಳು ನಿರ್ಧಾರಾತ್ಮಕ ಸ್ಥಾನಕ್ಕೇರುತ್ತದೆ ಎಂಬುದು ವಿರೋಧ ಪಕ್ಷಗಳ ಮುಖ್ಯ ಆಕ್ಷೇಪಣೆಯಾಗಿವೆ. ಇದು ಪ್ರತಿಯೊಂದು ರಾಜ್ಯಕ್ಕೂ ಸಮಾನ ಮಹತ್ವ ಮತ್ತು ಪ್ರತಿನಿಧಿತ್ವ ಸಿಗಬೇಕು ಎಂಬ ಒಕ್ಕೂಟ ತತ್ವಕ್ಕೆ ವಿರುದ್ಧ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. ಸರ್ಕಾರ ಈ ಆತಂಕವನ್ನು ತಳ್ಳಿ ಹಾಕುತ್ತಾ, ಲೋಕಸಭಾ ಸ್ಥಾನಗಳನ್ನು 50 ಶೇಕಡಾ ಹೆಚ್ಚಿಸುವ ಯೋಜನೆಯಿಂದ ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯಕ್ಕೂ ಹೆಚ್ಚುವರಿ ಸ್ಥಾನಗಳು ಲಭಿಸುವುದಾಗಿ ಸ್ಪಷ್ಟಪಡಿಸಿದೆ.

Amit Shah
2029 ರ ಲೋಕಸಭೆ ಚುನಾವಣೆಗೆ 543 ಕ್ಷೇತ್ರಗಳಲ್ಲ 850 ಕ್ಷೇತ್ರಗಳಿಗೆ ಮತದಾನ?: ಮಹಿಳಾ ಮೀಸಲಾತಿ ಜಾರಿಗೆ ವಿಶೇಷ ಅಧಿವೇಶನ!

ಉದಾಹರಣೆಗಳ ಸಮೇತ ವಿವರಣೆ ನೀಡಿದ ಅಮಿತ್ ಶಾ, ತಮಿಳುನಾಡಿಗೆ ಇನ್ನೂ 20 ಸ್ಥಾನಗಳು, ಕೇರಳಕ್ಕೆ 10, ತೆಲಂಗಾಣಕ್ಕೆ 9 ಮತ್ತು ಆಂಧ್ರಪ್ರದೇಶಕ್ಕೆ 13 ಲೋಕಸಭಾ ಸ್ಥಾನಗಳು ಹೆಚ್ಚುವರಿಯಾಗಿ ಸಿಗಲಿವೆ ಎಂದು ಹೇಳಿದರು. ಉತ್ತರ ಪ್ರದೇಶದ ನಂತರ ಲೋಕಸಭೆಯಲ್ಲಿ ಎರಡನೇ ಅತಿ ಹೆಚ್ಚು ಸಂಸದರನ್ನು ಹೊಂದಿರುವ ಮಹಾರಾಷ್ಟ್ರಕ್ಕೆ 24 ಹೆಚ್ಚುವರಿ ಸ್ಥಾನಗಳು ಲಭಿಸಲಿವೆ.

ಮಹಿಳಾ ಮೀಸಲಾತಿ ಜಾರಿಗೆ ತರಲು, ಸರ್ಕಾರ 2011ರ ಜನಗಣತಿ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮರುವಿಂಗಡಣೆ (ಡಿಲಿಮಿಟೇಶನ್) ನಡೆಸಿ, ನಂತರ ಸ್ಥಾನಗಳ ಸಂಖ್ಯೆಯನ್ನು 50 ಶೇಕಡಾ ಹೆಚ್ಚಿಸುವ ಮೂಲಕ ಲೋಕಸಭೆಯ ಒಟ್ಟು ಸ್ಥಾನಗಳನ್ನು 850ಕ್ಕೆ ಏರಿಸುವ ಯೋಜನೆ ಹೊಂದಿದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಮರುವಿಂಗಡಣೆಯಿಂದ ಬೇರ್ಪಡಿಸಿದರೆ ತಾವು ಅಡ್ಡಿ ತೆಗೆದುಹಾಕಲು ಸಿದ್ಧ ಎಂದು ವಿರೋಧ ಪಕ್ಷಗಳು ಹೇಳಿವೆ. ಸಂಸತ್ತಿನ ಸಂಖ್ಯಾಬಲವನ್ನು ಗಮನಿಸಿದರೆ, ವಿರೋಧ ಪಕ್ಷಗಳು ಏಕತೆಯಿಂದ ನಿಂತರೆ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ, ಸಂಸತ್ತಿನ ಪ್ರತಿಯೊಂದು ಸದನದಲ್ಲೂ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಎರಡು-ಮೂರನೇ ಬಹುಮತ ಅಗತ್ಯ. ಲೋಕಸಭೆಯ ಸದಸ್ಯರ ಸಂಖ್ಯೆ 541 ಆಗಿರುವುದರಿಂದ, ಮೂರನೇ ಎರಡರಷ್ಟು ಬಹುಮತದ ಗಡಿ 360 ಮತಗಳಾಗುತ್ತದೆ.

293 ಸದಸ್ಯರನ್ನೊಳಗೊಂಡಿರುವ ಆಡಳಿತಾರೂಢ ಎನ್‌ಡಿಎಗೆ ಇನ್ನೂ 67 ಸ್ಥಾನಗಳ ಕೊರತೆಯಿದೆ. ರಾಜ್ಯಸಭೆಯಲ್ಲಿ ಅಗತ್ಯವಾದ ‘ಮ್ಯಾಜಿಕ್ ನಂಬರ್’ 163 ಆಗಿದ್ದು, 142ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಎನ್‌ಡಿಎಗೆ ಬಹುಮತ ಗುರಿ ತಲುಪಲು ಇನ್ನೂ 21 ಸ್ಥಾನಗಳು ಬೇಕಾಗಿವೆ.

Amit Shah
Watch | ಲೋಕಸಭಾ ಕ್ಷೇತ್ರ ಮರು ವಿಂಗಡಣೆ: ದಕ್ಷಿಣ ರಾಜ್ಯಗಳಿಗೆ ಇದು ಉತ್ತಮ ಡೀಲ್- ತೇಜಸ್ವಿ ಸೂರ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com