

ನವದೆಹಲಿ: ಮೋದಿ ಸರ್ಕಾರ ಏಳು ವರ್ಷಗಳ ಕಾಲ ಲೋಕಸಭೆಯಲ್ಲಿ ಉಪಸಭಾಪತಿಯನ್ನು ನೇಮಿಸದಿರುವುದನ್ನು ವಿರೋಧಿಸಿ ರಾಜ್ಯಸಭೆಯ ಉಪಸಭಾಪತಿ ಚುನಾವಣೆಯನ್ನು ಪ್ರತಿಪಕ್ಷಗಳು ಬಹಿಷ್ಕರಿಸಲಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಸರ್ಕಾರ ಯಾವುದೇ ಅರ್ಥಪೂರ್ಣ ಸಮಾಲೋಚನೆಗಳನ್ನು ನಡೆಸಿಲ್ಲ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಹರಿವಂಶ್ 3.0" ವಿರೋಧ ಪಕ್ಷಗಳ ಮನವಿಗಳನ್ನು ಆಲಿಸುತ್ತಾರೆ ಎಂಬ ವಿಶ್ವಾಸವಿದೆ. ಮೊದಲನೆಯದಾಗಿ ಮೋದಿ ಸರ್ಕಾರ 7 ವರ್ಷಗಳಿಂದ ಲೋಕಸಭೆಯಲ್ಲಿ ಉಪಸಭಾಪತಿಯನ್ನು ನೇಮಿಸಿಲ್ಲ. ಇದು ಹಿಂದೆಂದೂ ಆಗಿರಲಿಲ್ಲ ಎಂದಿದ್ದಾರೆ.
ಎರಡನೆಯದಾಗಿ ರಾಜ್ಯಸಭೆ ಉಪಸಭಾಪತಿ ಹರಿವಂಶ್ ಅವರ ಎರಡನೇ ಅವಧಿ ಏಪ್ರಿಲ್ 9 ರಂದು ಕೊನೆಗೊಂಡಿತು. ಒಂದು ದಿನದ ನಂತರ ಅವರನ್ನು ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನ ಮಾಡಿದರು ಮತ್ತು ಅವರು ಈಗ ಮೂರನೇ ಅವಧಿಗೆ ಎನ್ಡಿಎಯ ಉಪಸಭಾಪತಿಯ ಅಭ್ಯರ್ಥಿಯಾಗಿದ್ದಾರೆ. ರಾಷ್ಟ್ರಪತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ವ್ಯಕ್ತಿಯನ್ನು ಈ ಹಿಂದೆಂದೂ ಉಪಸಭಾಪತಿ ಹುದ್ದೆಗೆ ಪರಿಗಣಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮೂರನೆಯದಾಗಿ, ವಿರೋಧ ಪಕ್ಷಗಳೊಂದಿಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆಗಳಿಲ್ಲದೆ ಇದೆಲ್ಲವೂ ನಡೆಯುತ್ತಿದೆ. ಈ ಮೂರು ಕಾರಣಗಳಿಗಾಗಿ ಮತ್ತು ಪ್ರತಿಭಟನೆಯ ಸಂಕೇತವಾಗಿ, ಹರಿವಂಶ್ ಅವರಿಗೆ ಯಾವುದೇ ಅಗೌರವ ತೋರದೆ ವಿರೋಧ ಪಕ್ಷವು ಏಪ್ರಿಲ್ 17 ರಂದು ನಿಗದಿಯಾಗಿದ್ದ ಉಪಸಭಾಪತಿಯ ಚುನಾವಣೆಯನ್ನು ಬಹಿಷ್ಕರಿಸಲು ವಿಷಾದದಿಂದ ನಿರ್ಧರಿಸಿದೆ" ಎಂದು ರಮೇಶ್ ಹೇಳಿದ್ದಾರೆ.
ರಾಜ್ಯಸಭೆಯು ಏಪ್ರಿಲ್ 17 ರಂದು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಿದೆ. ಆಡಳಿತಾರೂಢ ಎನ್ಡಿಎ ಹರಿವಂಶ್ ಅವರನ್ನು ಪ್ರಮುಖ ಹುದ್ದೆಗೆ ಮರು ಆಯ್ಕೆ ಮಾಡುವ ಸಾಧ್ಯತೆಯಿದೆ.
Advertisement