

ನಾಸಿಕ್: ನಾಸಿಕ್ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ 150ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಆಪ್ತ ಸಹಾಯಕ ಮತ್ತು ಅವರ ಪತ್ನಿ ಶುಕ್ರವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆ ವಿರೋಧ ಪಕ್ಷಗಳ ನಾಯಕರ ಒಂದು ವರ್ಗ ಅನುಮಾನ ವ್ಯಕ್ತಪಡಿಸಿದೆ.
ಅಹಲ್ಯಾನಗರದ ಕೋಪರ್ಗಾಂವ್ ತಾಲ್ಲೂಕಿನ ಸಮೃದ್ಧಿ ಹೆದ್ದಾರಿಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಜ್ಯೋತಿಷಿಯ ಆಪ್ತ ಜಿತೇಂದ್ರ ಶೆಲ್ಕೆ(50) ಮತ್ತು ಅವರ ಪತ್ನಿ ಅನುರಾಧಾ ಮೃತಪಟ್ಟಿದ್ದಾರೆ. ಅವರ 14 ವರ್ಷದ ಮಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿರೋಧ ಪಕ್ಷದ ನಾಯಕರು ಈಗ ಅಪಘಾತ ಸಂಭವಿಸಿದ ಸಂದರ್ಭ ಮತ್ತು ಸಮಯದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
"ಖರತ್ ಅವರ ಇತರ ಬಹಿರಂಗಪಡಿಸದ ದುಷ್ಕೃತ್ಯಗಳು ಬೆಳಕಿಗೆ ಬರದಂತೆ ತಡೆಯಲು ಈ ಅಪಘಾತವನ್ನು ಯೋಜಿಸಲಾಗಿದೆಯೇ" ಎಂದು ಎನ್ಸಿಪಿ ಶಾಸಕ ರೋಹಿತ್ ಪವಾರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಈ ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದಲ್ಲದೆ, ಭೋಂಡು ಖರತ್ ಅವರ ವಿಚಾರಣೆಯಲ್ಲಿಯೂ ಹಲವು ವಿಷಯಗಳು ಹೊರಹೊಮ್ಮುವ ಸಾಧ್ಯತೆಯಿರುವುದರಿಂದ, ಅವರ ಸುರಕ್ಷತೆಯನ್ನು ಸಹ ಖಚಿತಪಡಿಸಿಕೊಳ್ಳಬೇಕು" ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕಿ ಪ್ರಣಿತಿ ಶಿಡೆ ಅವರು, ಅಶೋಕ್ ಖರತ್ ಅವರನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಬಹುದು ಎಂದು ಹೇಳಿದ್ದಾರೆ.
"ಅವರು (ಖರತ್) ಎನ್ಕೌಂಟರ್ನಲ್ಲಿ ಹತ್ಯೆಯಾಗಬಹುದು ಎಂದು ನಾನು ಭಾವಿಸುತ್ತೇನೆ; ತನಿಖೆಯ ಸಮಯದಲ್ಲಿ ಹಲವು ಹೆಸರುಗಳು ಹೊರಬರಲಿವೆ. ಅವರಲ್ಲಿ ಕೆಲವರು ಮಹಾರಾಷ್ಟ್ರದ ರಾಜ್ಯ ಸಚಿವರು ಸೇರಿದಂತೆ, ಪ್ರಸ್ತುತ ಆಡಳಿತ ವ್ಯವಸ್ಥೆಯ ಭಾಗವಾಗಿರಬಹುದು" ಎಂದು ಕಾಂಗ್ರೆಸ್ ನಾಯಕಿ ಆರೋಪಿಸಿದ್ದಾರೆ.
Advertisement