

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 800 ಕ್ಕೂ ಹೆಚ್ಚು ಸ್ಥಾನಗಳಿಗೆ ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆ ಸೋಲಾಗಿದ್ದಕ್ಕೆ ಒಡಿಶಾದ ವಿರೋಧ ಪಕ್ಷ ಬಿಜೆಡಿ ಸಂಭ್ರಮಿಸಿದೆ.
ಮಸೂದೆಯನ್ನು ಬೆಂಬಲಿಸಿ 298 ಸದಸ್ಯರು ಮತ ಚಲಾಯಿಸಿದರೆ, 230 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಬೇರ್ಪಡಿಸಬೇಕೆಂದು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಈ ಹಿಂದೆ ಒತ್ತಾಯಿಸಿದ್ದರು.
"ಸತ್ಯಮೇವ ಜಯತೇ! ಸತ್ಯ ಮೇಲುಗೈ ಸಾಧಿಸಿದೆ ಇಂದು ಸಂಸತ್ತಿನಲ್ಲಿ ಸೋತಿದ್ದು ಮಹಿಳಾ ಮೀಸಲಾತಿ ಮಸೂದೆಯಲ್ಲ, ಬದಲಾಗಿ ವಿವಾದಾತ್ಮಕ ಡಿಲಿಮಿಟೇಶನ್ ಮಸೂದೆ (131 ನೇ ಸಾಂವಿಧಾನಿಕ ತಿದ್ದುಪಡಿ)" ಎಂದು ಬಿಜೆಡಿಯ ಸಂಸದೀಯ ಪಕ್ಷದ ನಾಯಕ ಮಾನಸ್ ರಂಜನ್ ಮಂಗರಾಜ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
"ಇದು ಒಡಿಶಾದಂತಹ ರಾಜ್ಯಗಳಿಗೆ ದೊಡ್ಡ ವಿಜಯವಾಗಿದೆ. ಏಕೆಂದರೆ ಅವು ತಮ್ಮ ಹಕ್ಕಿನ ಪಾಲನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದವು. ನಮ್ಮ ನಾಯಕ ನವೀನ್ ಪಟ್ನಾಯಕ್ ಈ ವಿಷಯದ ಬಗ್ಗೆ ದೃಢ ಮತ್ತು ಕ್ರಿಯಾಶೀಲ ನಿಲುವನ್ನು ತೆಗೆದುಕೊಂಡರು. ಈ ಸಂಬಂಧ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ರಾಜ್ಯದ ಎಲ್ಲಾ ಸಂಸದರಿಗೆ ಪತ್ರ ಬರೆದು ಒಡಿಶಾದ ಹಿತಾಸಕ್ತಿಗಳನ್ನು ಕಾಪಾಡುವಂತೆ ಒತ್ತಾಯಿಸಿದ್ದರು ಎಂದು ಮಂಗರಾಜ್ ಹೇಳಿದ್ದಾರೆ.
ದುರದೃಷ್ಟವಶಾತ್, ಒಡಿಶಾದ 20 ಬಿಜೆಪಿ ಸಂಸದರು ಈ ಸಂದರ್ಭಕ್ಕೆ ತಕ್ಕಂತೆ ನಿಲ್ಲಲು ವಿಫಲರಾದರು. ಅವರು ರಾಜ್ಯದ ಹಕ್ಕುಗಳಿಗಾಗಿ ನಿಲ್ಲುವ ಬದಲು ಪಕ್ಷದ ನಿರ್ದೇಶನಗಳೊಂದಿಗೆ ಹೊಂದಿಕೊಳ್ಳಲು ಆಯ್ಕೆ ಮಾಡಿಕೊಂಡರು" ಎಂದು ಬಿಜೆಡಿ ನಾಯಕ ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಸೀಮಿತ ಪ್ರಾತಿನಿಧ್ಯದ ಹೊರತಾಗಿಯೂ, ಒಡಿಶಾ ಮತ್ತು ಅದರ ಜನರಿಗಾಗಿ ಹೋರಾಡುವ ನಮ್ಮ ನಾಯಕನ ದೃಢ ಬದ್ಧತೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.
Advertisement