ಅಮೆರಿಕಾ-ಇರಾನ್ ಶಾಂತಿ ಮಾತುಕತೆಗೆ ಪಾಕ್ ಮಧ್ಯಸ್ಥಿಕೆ: ಮೋದಿ ವಿದೇಶಾಂಗ ನೀತಿಗೆ ಭಾರೀ ಹಿನ್ನಡೆ; ಕಾಂಗ್ರೆಸ್

ಒಸಾಮ ಬಿನ್‌ ಲಾಡೆನ್ ಮತ್ತು ಇತರ ಭಯೋತ್ಪಾದಕರಿಗೆ ಆಶ್ರಯ ನೀಡಿದ ನಂತರ, ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದ ಮತ್ತು ಒಂದು ವರ್ಷದ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯನ್ನು ಸಂಘಟಿಸಿದ ನಂತರವೂ ಪಾಕಿಸ್ತಾನವು ಈಗ ಪ್ರಮುಖ ರಾಜತಾಂತ್ರಿಕ ಪಾತ್ರ ನಿರ್ವಹಿಸುತ್ತಿದೆ.
Jairam Ramesh
ಜೈರಾಮ್ ರಮೇಶ್
Updated on

ನವದೆಹಲಿ: ಅಮೆರಿಕಾ–ಇರಾನ್ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ವಹಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.

ಈ ಬೆಳವಣಿಗೆಯನ್ನು “ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಆಗಿರುವ ಭಾರೀ ಹಿನ್ನಡೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಯಾವ ದೇಶವನ್ನು ‘ದಲ್ಲಾಳಿ’ ಎಂದು ಕರೆದಿದ್ದರೋ, ಅದೇ ದೇಶವು ಇಂದು ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಒಸಾಮ ಬಿನ್‌ ಲಾಡೆನ್ ಮತ್ತು ಇತರ ಭಯೋತ್ಪಾದಕರಿಗೆ ಆಶ್ರಯ ನೀಡಿದ ನಂತರ, ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದ ಮತ್ತು ಒಂದು ವರ್ಷದ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯನ್ನು ಸಂಘಟಿಸಿದ ನಂತರವೂ ಪಾಕಿಸ್ತಾನವು ಈಗ ಪ್ರಮುಖ ರಾಜತಾಂತ್ರಿಕ ಪಾತ್ರ ನಿರ್ವಹಿಸುತ್ತಿದೆ. ಪಾಕಿಸ್ತಾನವನ್ನು ಪ್ರತ್ಯೇಕಿಸುವಲ್ಲಿ ಪ್ರಧಾನಿ ಮೋದಿ ಅವರ ಪ್ರಾದೇಶಿಕ, ಜಾಗತಿಕ ಕಾರ್ಯತಂತ್ರ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಕುಮ್ಮಕ್ಕು ನೀಡಿದ್ದ ಪಾಕ್‌ನ ಫೀಲ್ಡ್ ಮಾರ್ಷಲ್ ಮುನೀರ್, ಈಗ ಟ್ರಂಪ್ ಅವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿರುವುದು ಭಾರತಕ್ಕೆ ತೀವ್ರ ಹಿನ್ನಡೆಯಾಗಿದೆ’ ಎಂದು ತಿಳಿಸಿದ್ದಾರೆ.

Jairam Ramesh
ಮೋದಿ ರಾಮಾಯಣದಲ್ಲಿ ಸೀತಾಮಾತೆಯನ್ನು ಅಪಹರಿಸಲು ಬಂದಿದ್ದ ಮಾರೀಚನಿದ್ದಂತೆ; ರೇವಂತ್ ರೆಡ್ಡಿ ವಿವಾದ!

ಮುನೀರ್ ಅವರು ಟ್ರಂಪ್ ಕುಟುಂಬ ಮತ್ತು ಸಹಚರರ ವಲಯವನ್ನು ಭಾರತಕ್ಕಿಂತ ಉತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದಂತೆ ತೋರುತ್ತಿದೆ. ಇದು ಮೋದಿ ಅವರ ವಿದೇಶಾಂಗ ನೀತಿಗೆ ಉಂಟಾದ ಬೃಹತ್ ಹಿನ್ನಡೆಯಾಗಿದೆ’ ಎಂದು ಕುಟುಕಿದ್ದಾರೆ.

ಇರಾನ್–ಅಮೆರಿಕ ನಡುವಿನ ಸಂಘರ್ಷ ಕೊನೆಗೊಳಿಸುವ ಉದ್ದೇಶದಿಂದ ಏಪ್ರಿಲ್ 11 ಮತ್ತು 12ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಅಪರೂಪದ ನೇರ ಮಾತುಕತೆ ನಡೆದಿತ್ತು. ಆದರೆ, ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯವಾಗಿತ್ತು.

ಮಂಗಳವಾರ ಮುಕ್ತಾಯಗೊಳ್ಳಲಿರುವ ಎರಡು ವಾರಗಳ ಕದನ ವಿರಾಮವನ್ನು ವಿಸ್ತರಿಸುವ ಭರವಸೆಯೊಂದಿಗೆ ಟ್ರಂಪ್, ಈಗ ಮತ್ತೊಂದು ಸುತ್ತಿನ ಮಾತುಕತೆ ಘೋಷಿಸಿದ್ದಾರೆ. ನಮ್ಮ ಪ್ರತಿನಿಧಿಗಳು ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ, ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸದಿರಲು ಇರಾನ್ ತೀರ್ಮಾನಿಸಿದೆ.

ಅಮೆರಿಕಾ “ಅತಿಯಾದ ಬೇಡಿಕೆಗಳು, ನಿರಂತರ ಆರೋಪ ಮತ್ತು ದಂದ್ವ ನಿಲುವು ತೋರಿಸುತ್ತಿದ್ದು, ಈ ಕಾರಣಗಳಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಅರ್ಥಪೂರ್ಣ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ಅಮೆರಿಕಾ ಒಂದೆಡೆ ಶಾಂತಿ ಮಾತುಗಳನ್ನು ಮುಂದುವರಿಸುತ್ತಿದ್ದರೂ, ಮತ್ತೊಂದೆಡೆ ಸೇನಾ ಒತ್ತಡ, ನೌಕಾ ನಿರ್ಬಂಧ ಮತ್ತು ಆರ್ಥಿಕ ದಂಡನೆಗಳನ್ನು ಹೆಚ್ಚಿಸುತ್ತಿದೆ. ಈ ದ್ವಂದ್ವ ನಿಲುವುಗಳಿಂದ ವಿಶ್ವಾಸ ನಿರ್ಮಾಣ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ಶಾಂತಿ ಮಾತುಕತೆಗಳ ಮೂಲ ಉದ್ದೇಶವನ್ನು ಅಮೆರಿಕಾ ಹಾಳುಮಾಡುತ್ತಿದೆ ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com