

ಮುಂಬೈ: ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಮುಂಬೈನಲ್ಲಿ ನಡೆದ ಬಿಜೆಪಿ ರ್ಯಾಲಿಯಿಂದ ಉಂಟಾದ ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ವಕೀಲ ಗುಣರತ್ನ ಸದಾವರ್ತೆ ಅವರ ಪುತ್ರಿ ಝೆನ್ ಸದಾವರ್ತೆ ಬುಧವಾರ ವರ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆಯ ಸೋಲಿನಿಂದಾಗಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಆಯೋಜಿಸಿದ್ದ ರ್ಯಾಲಿ ವೇಳೆ ಈ ಘಟನೆ ನಡೆದಿತ್ತು.
ರಸ್ತೆಗಳನ್ನು ನಿರ್ಬಂಧಿಸಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡಿದ್ದಕ್ಕಾಗಿ ಆಕ್ರೋಶಗೊಂಡ ಮಹಿಳೆಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವ ಮಹಾಜನ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಸಮೀಪದಲ್ಲಿರುವ ಮೈದಾನದಲ್ಲಿ ಯಾಕೆ ರ್ಯಾಲಿ ನಡೆಸಬಾರದು, ನೀವು ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದೀರಿ. ಇಲ್ಲಿಂದ ನೀವು ಹೊರಡಿ ಎಂದು ಕೂಗಾಡಿದ್ದರು.
ಈ ಸಂಬಂಧ ಸಲ್ಲಿಕೆಯಾಗಿರುವ ದೂರಿನಲ್ಲಿ ಮಹಿಳೆ ಅವಾಚ್ಯ ಶಬ್ದಗಳನ್ನು ಬಳಸಿ, ರ್ಯಾಲಿಗೆ ಅಡ್ಡಿಪಡಿಸಿದರು ಮತ್ತು ಸಾರ್ವಜನಿಕವಾಗಿ ಗೊಂದಲವನ್ನುಂಟು ಮಾಡಿದರು ಎಂದು ಹೇಳಿದ್ದಾರೆ. ಕಷ್ಟಪಟ್ಟು ದುಡಿಯುವ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು, ಸಂವಿಧಾನ ಮತ್ತು ಸಾಂವಿಧಾನಿಕ ಕಾರ್ಯವಿಧಾನವನ್ನು ಅವಮಾನಿಸಲು ಈ ದೇಶದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 221 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು), 132 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 352 (ಉದ್ದೇಶಪೂರ್ವಕ ಅವಮಾನ), 195 (ಸಾರ್ವಜನಿಕ ನೌಕರನ ಮೇಲೆ ಹಲ್ಲೆ ಅಥವಾ ಅಡ್ಡಿಪಡಿಸುವುದು) ಮತ್ತು 353 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಸೇರಿದಂತೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸದಾವರ್ತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನಾ ಮಾತನಾಡಿದ ಮಹಾಜನ್, ಮಹಿಳೆಯ ಕೋಪ ಸ್ವಲ್ಪ ಮಟ್ಟಿಗೆ" ಸಮರ್ಥನೀಯವಾಗಿದೆ. ಆದಾಗ್ಯೂ, ಅವರ ಭಾಷೆ ಅನುಚಿತವಾಗಿದೆ ಎಂದು ಹೇಳಿದರು. ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.
Advertisement