

ಚಂಡೀಗಢ: ನಮ್ಮ ಪಕ್ಷದ ಮಾಜಿ ಹಿರಿಯ ನಾಯಕ ರಾಘವ್ ಚಡ್ಡಾ ಅವರನ್ನು ಬಿಜೆಪಿ ಒಂದು 'ಟೂಲ್' ಆಗಿ ಬಳಸಿಕೊಂಡು ನಮ್ಮ ಪಕ್ಷವನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕ ಶುಕ್ರವಾರ ಆರೋಪಿಸಿದೆ.
ಎಎಪಿಯ ಆರೋಪಗಳು ಆಧಾರರಹಿತ ಎಂದು ಬಿಜೆಪಿ ತಿರುಗೇಟು ನೀಡಿದೆ.
ಇಂದು ರಾಘವ್ ಚಡ್ಡಾ ಸೇರಿದಂತೆ ಎಎಪಿಯ 7 ಸಂಸದರು ಬಿಜೆಪಿ ಸೇರಿದ ಬಳಿಕ ಚಂಡೀಗಢದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ಪಂಜಾಬ್ನ ಮುಖ್ಯ ವಕ್ತಾರ ಬಲ್ತೇಜ್ ಪನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಘವ್ ಛಡ್ಡಾ ಮೂಲಕ ಎಎಪಿ ಸಂಸದರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ಪಕ್ಷವನ್ನು ದುರ್ಬಲಗೊಳಿಸಲು ಮತ್ತು ಸಂಸತ್ತಿನಲ್ಲಿ ಪಕ್ಷದ ಧ್ವನಿಯನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
"ರಾಜ್ಯಸಭೆಯ ಏಳು ಸಂಸದರೊಂದಿಗೆ ಪಕ್ಷಕ್ಕೆ ಬಂದರೆ ನಿಮ್ಮನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಅಮಿತ್ ಶಾ ಅವರು ರಾಘವ್ ಚಡ್ಡಾ ಅವರಿಗೆ ಹೇಳಿದ್ದಾರೆ ಎಂಬ ವರದಿ ನಮ್ಮ ಪಕ್ಷಕ್ಕೆ ಇದೆ" ಎಂದು ಪನ್ನು ಹೇಳಿದ್ದಾರೆ.
ಇಡಿ ಯಂತಹ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಅವರು(ಬಿಜೆಪಿ) ನಮ್ಮ ಸಂಸದರನ್ನು ಭಯಭೀತಗೊಳಿಸಲು ಮತ್ತು ಒತ್ತಡ ಹೇರಲು ಬಯಸುತ್ತಾರೆ. ಆದರೆ ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.
Advertisement