

ನವದೆಹಲಿ: ಹೆಚ್ಚುತ್ತಿರುವ ಇಂಧನ ದರವನ್ನು ಜನರ ಮೇಲೇ ವರ್ಗಾವಣೆ ಮಾಡುವುದು “ಅನಿವಾರ್ಯ” ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ನವದೆಹಲಿಯಲ್ಲಿ ಬುಧವಾರ ಬಿಡುಗಡೆಗೊಂಡ ಮಾಸಿಕ ಆರ್ಥಿಕ ಪರಿಶೀಲನೆಯಲ್ಲಿ, ಹೆಚ್ಚಿದ ಇಂಧನದ ಬೆಲೆಗಳನ್ನು ಜನರು ಮತ್ತು ಉದ್ಯಮಗಳಿಗೆ ವರ್ಗಾಯಿಸುವುದು ತಪ್ಪಿಸಲಾಗದ ಕ್ರಮ ಎಂದು ಹೇಳಿದೆ.
ಕೆಲವು ದೇಶಗಳು ಈಗಾಗಲೇ ಈ ಹೆಚ್ಚಿದ ವೆಚ್ಚವನ್ನು ನೇರವಾಗಿ ಬಳಕೆದಾರರ ಮೇಲೆ ಹೇರುವುದನ್ನು ಪ್ರಾರಂಭಿಸಿವೆ, ಇನ್ನೂ ಕೆಲವು ದೇಶಗಳು ಅದನ್ನು ಮುಂದೂಡುತ್ತಿವೆ. ಆದರೆ, ಪೂರೈಕೆ ವ್ಯತ್ಯಯದ ಸಂದರ್ಭಗಳಲ್ಲಿ ಬೇಡಿಕೆ ನಿಯಂತ್ರಣ ಅಗತ್ಯವಾಗಿದೆ. ಇಲ್ಲದಿದ್ದರೆ ಇಂಧನಕ್ಕಾಗಿ ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಇದೇ ವೇಳೆ ಸ್ಥೂಲ ಆರ್ಥಿಕ ಸ್ಥಿರತೆ ಅಗತ್ಯತೆಯನ್ನು ಒತ್ತಿ ಹೇಳಿದ ಸಚಿವಾಲಯ, ತಾತ್ಕಾಲಿಕ ಬೆಳವಣಿಗೆಯನ್ನು ಉತ್ತೇಜಿಸಲು ತೆಗೆದುಕೊಳ್ಳುವ ಕ್ರಮಗಳು ಮಧ್ಯ ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಹಾನಿ ಉಂಟುಮಾಡಬಹುದು ಎಂದು ಎಚ್ಚರಿಸಿದೆ.
ಇಂಧನ ಪೂರೈಕೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು ಸಮಯ ಬೇಕಾಗುವ ಕಾರಣ, ಹೆಚ್ಚಿನ ಬೆಲೆಗಳ ಭಾರವನ್ನು ಜನರೇ ಭರಿಸಬೇಕಾಗುತ್ತದೆ ಎಂಬ ತಿಳಿಸಿದೆ.
ಅಂತಾರಾಷ್ಟ್ರೀಯ ಸಂಸ್ಥೆಗಳು ಇಂಧನ ಪೂರೈಕೆ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಅಂದಾಜಿಸುತ್ತಿರುವುದು ವಾಸ್ತವಿಕತೆಗೆ ಸರಿಹೊಂದುವುದಿಲ್ಲ ಎಂದೂ ಸಚಿವಾಲಯ ತಿಳಿಸಿದೆ.
ಉತ್ಪಾದನೆ ಪುನರಾರಂಭ ಮತ್ತು ಸಾಗಣೆ ಪುನಃ ಆರಂಭಿಸಲು ಬೇಕಾಗುವ ಸಮಯವನ್ನು ಸಂಸ್ಥೆಗಳು ಪರಿಗಣಿಸುತ್ತಿಲ್ಲ ಎನ್ನಲಾಗುತ್ತಿದ್ದು, ಇಂಧನದ ಬೆಲೆಗಳು ಇಳಿಕೆಯಾಗುವ ಸಾಧ್ಯತೆಗಳು ಕಡಿಮೆಯಿದೆ ಎನ್ನಲಾಗುತ್ತಿದೆ.
ಏತನ್ಮಧ್ಯೆ ಭಾರತದ ಕಚ್ಚಾ ತೈಲದ ಸರಾಸರಿ ಬೆಲೆ ಮಾರ್ಚ್ನಲ್ಲಿ ಬ್ಯಾರೆಲ್ಗೆ 113 ಡಾಲರ್ ಆಗಿದ್ದು, ಏಪ್ರಿಲ್ನಲ್ಲಿ ಇದು ಸುಮಾರು 115 ಡಾಲರ್ ಮಟ್ಟದಲ್ಲಿ ಮುಂದುವರಿದಿದೆ.
ಐಸಿಆರ್ಎ ವರದಿ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ಲೀಟರ್ಗೆ 14 ಮತ್ತು 18 ರೂಪಾಯಿ ನಷ್ಟ ಎದುರಾಗುತ್ತಿದೆ. ದೇಶೀಯ ಎಲ್ಪಿಜಿಯನ್ನು FY27 ಕ್ಕೆ 80,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಬಿಕ್ಕಟ್ಟನ್ನು ಸುಧಾರಣೆಗೆ ಅವಕಾಶವನ್ನಾಗಿ ಬಳಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದ್ದು, ಇಂಧನ ಭದ್ರತೆಗೆ ಆದ್ಯತೆ ನೀಡಿ ತಂತ್ರಜ್ಞಾನದ ಸಂಗ್ರಹಣೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಸೂಚಿಸಿದೆ.
ದೇಶೀಯ ಮಟ್ಟದಲ್ಲಿ ಅಪರಾಧೀಕರಣ ರದ್ದುಪಡಿಸುವುದು ಮತ್ತು ನಿಯಂತ್ರಣ ಸಡಿಲಿಕೆ ಕ್ರಮಗಳು ಹೊರಗಿನ ಪರಿಸ್ಥಿತಿಗಳಿಂದ ಪ್ರಭಾವಿತರಾಗದೇ ಮುಂದುವರಿಯಬೇಕು ಎಂದು ತಿಳಿಸಿದೆ. ಜೊತೆಗೆ, ಆಮದು-ರಫ್ತು ವೆಚ್ಚವನ್ನು ಕಡಿಮೆ ಮಾಡುವ ನಿಯಂತ್ರಣ ಸರಳೀಕರಣ ಕ್ರಮಗಳು ಈ ಸಮಯದಲ್ಲಿ ಅತ್ಯಂತ ಉಪಯುಕ್ತವಾಗುತ್ತವೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
Advertisement