

ಮುಂಬೈ: ದೆಹಲಿಯಲ್ಲಿ ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರಿಂದ ಲಾಠಿ ಏಟು ತಿಂದ ಯುವಕರಿಗೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಶಿವಸೇನೆ-ಯುಬಿಟಿ ನಾಯಕ ಉದ್ಧವ್ ಠಾಕ್ರೆ ಶನಿವಾರ ಆಗ್ರಹಿಸಿದ್ದಾರೆ.
"ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಕ್ಷಮೆಯಾಚಿಸಬೇಕು. ಏಕೆಂದರೆ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿ, ಪೆಲೆಟ್ ಗನ್ ಮತ್ತು ಅಶ್ರುವಾಯುಗಳಿಂದ ಹೊಡೆದರು....ಕೆಲವು ಪುರುಷ ಪೊಲೀಸರು ಮಹಿಳಾ ಪ್ರತಿಭಟನಾಕಾರರ ಬಟ್ಟೆಗಳನ್ನು ಹರಿದು ಹಾಕಿದರು" ಎಂದು ಠಾಕ್ರೆ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸ್ ಕ್ರಮವು ಅವರ ಮನಸ್ಸಿನಲ್ಲಿ ಶಾಶ್ವತವಾಗಿ ಕೆಟ್ಟ ಪರಿಣಾಮ ಬೀರಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ನೀಟ್ ಅಕ್ರಮ ಖಂಡಿಸಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮನ್ನು ಮತ್ತು ತಮ್ಮ ದಿವಂಗತ ತಾಯಿಯನ್ನು ಸಹ ನಿಂದಿಸಲಾಗಿದೆ. ಆದರೆ ಅವರನ್ನು ಕ್ಷಮಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಧಾನಿ ವಿಡಿಯೋಗೆ ಪ್ರತಿಕ್ರಿಯಿಸಿದ ಠಾಕ್ರೆ, "ಕ್ಷಮಿಸುವುದಲ್ಲ, ನೀವೇ ಯುವಕರ ಬಳಿ ಕ್ಷಮೆ ಕೇಳುವ ಅವಶ್ಯಕತೆಯಿದೆ. ಯುವಕರು ನಿಮ್ಮನ್ನು ಹೇಗೆ ಕ್ಷಮಿಸುತ್ತಾರೆ? ನೀವು ಮೊದಲು ಅವರನ್ನು ಜಿರಳೆ ಎಂದು ಕರೆಯುತ್ತೀರಿ. ನಂತರ ಅವರನ್ನು ದಾರಿ ತಪ್ಪಿದವರು ಎಂದು ಕರೆಯುತ್ತೀರಿ" ಎಂದು ಠಾಕ್ರೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯ ಸಮಯದಲ್ಲಿ ಯುವಕರು ಬಳಸಿದ ಭಾಷೆ ಪ್ರಶ್ನಾರ್ಹವಾಗಿರಬಹುದು. ಆದರೆ ಮೋದಿಯ ಕಟ್ಟಾ ಅಭಿಮಾನಿಗಳು ಬಳಸುವ ಭಾಷೆಯನ್ನು ಮತ್ತು ಅವರು ಟ್ರೋಲ್ ಮಾಡುವ ರೀತಿಗೆ ದೂಷಿಸಬೇಕು ಎಂದರು.