

ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಗದ್ದಲದ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಎನ್ಡಿಎ (NDA) ಮೈತ್ರಿಕೂಟದ ಲೋಕಸಭಾ ಸಂಸದರೊಂದಿಗೆ ಉಪಹಾರ ಸಭೆ ನಡೆಸಿದ್ದು, ಸಂಸದೀಯ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರಿಗೆ ಕರೆ ನೀಡಿದ್ದಾರೆ.
ಸಂಸತ್ತು "ಪ್ರಜಾಪ್ರಭುತ್ವದ ಅತ್ಯುನ್ನತ ದೇವಾಲಯ" ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಇತ್ತೀಚಿನ ಕಲಾಪಕ್ಕೆ ಅಡ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಗದ್ದಲದಿಂದಾಗಿ ಹೊಸ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಅವರಿಗೆ ಮಾಡುವ ಅನ್ಯಾಯವಾಗಿದೆ" ಎಂದು ಹೇಳಿದ ಅವರು, ಸಂಸತ್ತಿನ ಕಲಾಪಗಳು "ಸುಗಮವಾಗಿ ನಡೆಯಬೇಕು" ಎಂದಿದ್ದಾರೆ. ಸಂಸತ್ತಿನ ಇತಿಹಾಸವನ್ನು ಓದಲು, ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಪ್ರಧಾನಿ ಮೋದಿ ಸಂಸದರಿಗೆ ಸೂಚಿಸಿದ್ದಾರೆ. ಸಂಸತ್ತಿನಲ್ಲಿ ಅಪಾರ ಐತಿಹಾಸಿಕ ಮಾಹಿತಿಯಿದೆ. ಚರ್ಚೆಗಳಿಗೆ ಸಿದ್ಧವಾಗಲು ಅದನ್ನು ಬಳಸಿಕೊಳ್ಳಿ. ನಿಮ್ಮ ಆಯಾ ರಾಜ್ಯಗಳ ಅಭಿವೃದ್ಧಿಗಾಗಿ ಶ್ರಮಿಸಿ. ರಾಜ್ಯಗಳು ಪ್ರಗತಿ ಹೊಂದಿದಾಗ ಮಾತ್ರ ದೇಶವು ಪ್ರಗತಿ ಸಾಧಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI),ಶಿವಸೇನೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ), ರಾಷ್ಟ್ರೀಯ ಲೋಕ ಮೋರ್ಚಾ, ಎಐಎಡಿಎಂಕೆ (AIADMK) ಮತ್ತು ಯುಪಿಪಿಎಲ್ (UPPL) ಪಕ್ಷಗಳ 40ಕ್ಕೂ ಹೆಚ್ಚು ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಜೂನ್ನಲ್ಲಿ ಟಿಎಂಸಿ ತೊರೆದ 20 ಲೋಕಸಭಾ ಸಂಸದರು ಎನ್ಸಿಪಿಐ (NCPI) ಸೇರಿದ್ದರು. ಹಾಗೆಯೇ ಆರು ಶಿವಸೇನೆ (ಯುಬಿಟಿ) ಸಂಸದರು ಆ ಪಕ್ಷವನ್ನು ತೊರೆದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಂಡಿದ್ದರು. ಇದರೊಂದಿಗೆ ಕೆಳಮನೆಯಲ್ಲಿ ಶಿವಸೇನೆಯ ಸಂಸದರ ಸಂಖ್ಯೆ 13ಕ್ಕೇರಿತು. NCPI,ಎನ್ಡಿಎ ಮೈತ್ರಿಕೂಟವನ್ನು ಸೇರಿಕೊಂಡಿದ್ದು, ಶಿವಸೇನೆ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿ ಮುಂದುವರಿದಿದೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ನಾನು ನಿಮ್ಮೊಂದಿಗಿದ್ದು, ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಟಿಎಂಸಿ ಬಂಡಾಯ ಸಂಸದರು ಹಾಗೂ ಶಿವಸೇನೆ ಉದ್ಧವ್ ಬಣದಿಂದ ಏಕನಾಥ್ ಶಿಂಧೆಯ ಸೇನೆ ಸೇರಿದ ಆರು ಸಂಸದರಿಗೆ ಅಭಯ ನೀಡಿದ್ದಾರೆ.
NDA ಒಂದು ಕುಟುಂಬವಿದ್ದಂತೆ. ನಾವು ಮೈತ್ರಿಕೂಟದ ಎಲ್ಲಾ ಪಕ್ಷಗಳೊಂದಿಗೆ ಇದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಮತ್ತು ಅವಕಾಶ ನೀಡಲಾಗುವುದು. ನಾನು ಕೇವಲ ಎನ್ಡಿಎ (NDA) ಮೈತ್ರಿಕೂಟದ ಒಂದು ನಿರ್ದಿಷ್ಟ ಪಕ್ಷದೊಂದಿಗೆ ಮಾತ್ರವಲ್ಲ, ಬದಲಾಗಿ ಎನ್ಡಿಎಯ ಪ್ರತಿಯೊಬ್ಬ ಸಂಸದರೊಂದಿಗೂ ಇದ್ದೇನೆ. ನೀವು ಯಾರ ಬಗ್ಗೆಯೂ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಲು, ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸುವಂತೆಯೂ ಪ್ರಧಾನಿ ಅವರಿಗೆ ಕರೆ ನೀಡಿದರು. ನಿಮ್ಮ ಪ್ರದೇಶದಲ್ಲಿನ ಯಾವುದೇ ಅಭಿವೃದ್ಧಿ ಕಾರ್ಯಕ್ಕಾಗಿ ನೇರವಾಗಿ ಪ್ರಧಾನ ಮಂತ್ರಿಯವರ ಕಚೇರಿಯನ್ನು (PMO) ಸಂಪರ್ಕಿಸಿ, ಬಡ ಕಾರ್ಮಿಕರು ಮತ್ತು ರೈತರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಮತ್ತು ಅವರ ಸಮಸ್ಯೆಗಳನ್ನು ಅರಿಯಿರಿ ಎಂದು ಸೂಚಿಸಿದ್ದಾರೆ. ನಂತರ ಪ್ರಧಾನ ಮಂತ್ರಿಯವರು ಪ್ರತಿಯೊಬ್ಬ ಸಂಸದರನ್ನೂ ಪ್ರತ್ಯೇಕವಾಗಿ ಭೇಟಿಯಾಗಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.