40 ವರ್ಷಗಳ ಬೋಫೋರ್ಸ್ ಹಗರಣಕ್ಕೆ ಸುಪ್ರೀಂ ಅಂತಿಮ ತೆರೆ; ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿದ ಅರ್ಜಿ ಸುಪ್ರೀಂನಲ್ಲಿ ವಜಾ

40 ವರ್ಷಗಳ ಕಾಲ ದೇಶದ ರಾಜಕೀಯ ಮತ್ತು ರಕ್ಷಣಾ ರಂಗದಲ್ಲಿ ತಲ್ಲಣ ಸೃಷ್ಟಿಸಿದ್ದ ಬೋಫೋರ್ಸ್ ಹಗರಣದ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ. ಈ ಮೂಲಕ ದೆಹಲಿ ಹೈಕೋರ್ಟ್‌ನ 2005ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಕೊನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
Supreme Court
ಸುಪ್ರೀಂ ಕೋರ್ಟ್
Updated on

ನವದೆಹಲಿ: 40 ವರ್ಷಗಳ ಕಾಲ ದೇಶದ ರಾಜಕೀಯ ಮತ್ತು ರಕ್ಷಣಾ ರಂಗದಲ್ಲಿ ತಲ್ಲಣ ಸೃಷ್ಟಿಸಿದ್ದ ಬೋಫೋರ್ಸ್ ಹಗರಣದ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಈ ಮೂಲಕ ಹಿಂದೂಜಾ ಸಹೋದರರ ಮೇಲಿನ ಕ್ರಿಮಿನಲ್ ಆರೋಪಗಳನ್ನು ಖುಲಾಸೆಗೊಳಿಸಿದ್ದ ದೆಹಲಿ ಹೈಕೋರ್ಟ್‌ನ 2005ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಕೊನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕೊನೆಯ ಮೇಲ್ಮನವಿಯೂ ಕೊನೆ

2005 ರಲ್ಲಿ ದೆಹಲಿ ಹೈಕೋರ್ಟ್, ಹಿಂದೂಜಾ ಸಹೋದರರು ಹಾಗೂ ಸ್ವೀಡನ್‌ನ ಬೋಫೋರ್ಸ್ ಕಂಪನಿ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಜಾಗೊಳಿಸಿತ್ತು. ಆದರೆ, ವಕೀಲ ಅಜಯ್ ಅಗರ್ವಾಲ್ ಅವರು ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿಯನ್ನ ಸಲ್ಲಿಸಿದ್ದರು. ಇದರ ವಿಚಾರಣೆಯ ಸಂದರ್ಭದಲ್ಲಿ, ಮರಣ ಹೊಂದಿರುವ ಶ್ರೀಚಂದ್ ಹಿಂದೂಜಾ ಮತ್ತು ಗೋಪಿಚಂದ್ ಹಿಂದೂಜಾ ಅವರ ಹೆಸರುಗಳನ್ನು ಅರ್ಜಿಯಿಂದ ತೆಗೆದುಹಾಕಲು ವಕೀಲರು 4 ವಾರಗಳ ಕಾಲಾವಕಾಶ ಕೋರಿದ್ದರು. ಆದರೆ, ಈಗಾಗಲೇ ದಶಕಗಳು ಕಳೆದಿರುವುದರಿಂದ ಇನ್ನು ಮುಂದೆ ಈ ಪ್ರಕರಣವನ್ನು ಮುಂದೂಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ವಿನೋದ್ ಚಂದ್ರನ್ ಅವರಿದ್ದ ಪೀಠವು ಸ್ಪಷ್ಟಪಡಿಸಿತು. ಈ ಮೂಲಕ ಬೋಫೋರ್ಸ್ ಪ್ರಕರಣದಲ್ಲಿ ಉಳಿದಿರುವ ಕೊನೆಯ ಮೇಲ್ಮನವಿಯೂ ಕೂಡ ಕೊನೆಗೊಂಡಿತು.

ಇದಕ್ಕೂ ಮುನ್ನ 2018 ರಲ್ಲೇ ಸುಪ್ರೀಂ ಕೋರ್ಟ್, ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು 4,522 ದಿನಗಳ ಕಾಲ ವಿಳಂಬವಾಗಿ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿ ವಜಾಗೊಳಿಸಿತ್ತು. ಅದಾದ ನಂತರ ವಕೀಲ ಅಜಯ್ ಅಗರ್ವಾಲ್ ಅವರು ಮೇಲ್ಮನವಿಯನ್ನ ಸಲ್ಲಿಸಿದ್ದರು.

Supreme Court
ಕೋರ್ಟ್ ಕಲಾಪ ವರದಿಗೆ ಅವಕಾಶ, Audio-Video ಕ್ಲಿಪ್ ಹಂಚಿಕೆಗೆ ಬ್ರೇಕ್: ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ

ಏನಿದು ಬೋಫೋರ್ಸ್ ಹಗರಣ?

1986 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತ ಸರ್ಕಾರವು ಸ್ವೀಡನ್‌ನ ಎಬಿ ಬೋಫೋರ್ಸ್ ಕಂಪನಿಯೊಂದಿಗೆ ₹1,437 ಕೋಟಿ ವೆಚ್ಚದ 400 ಹವಿಟ್ಜರ್ ಫಿರಂಗಿ ಬಂದೂಕುಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಕುದುರಿಸಲು ಭಾರತದ ಪ್ರಭಾವಿ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಬೋಫೋರ್ಸ್ ಕಂಪನಿಯು ₹64 ಕೋಟಿ ರೂಪಾಯಿ ಲಂಚ ನೀಡಿದೆ ಎಂದು 1987 ರಲ್ಲಿ ಸ್ವೀಡನ್ ರೇಡಿಯೋ ಬಾಂಬ್ ಸಿಡಿಸಿತ್ತು. ಈ ಲಂಚದ ಹಣವನ್ನು ಸ್ವಿಸ್ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲು ಹಿಂದೂಜಾ ಸಹೋದರರು (ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಚಂದ್ ಹಿಂದೂಜಾ) ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ ಎಂದು ಸಿಬಿಐ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಆದ್ರೆ, ಇದೀಗ ಸುಪ್ರೀಂ ಕೋರ್ಟ್ ಕೊನೆಯ ಮೇಲ್ಮನವಿಯನ್ನು ವಜಾ ಮಾಡುವ ಮೂಲಕ ಬೋಫೋರ್ಸ್ ಹಗರಣದ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಕ್ತಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com