

ನವದೆಹಲಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿ ಸಾಧಿಸಲು ಭಾರತೀಯರು ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದರು. ಈ ಕನಸನ್ನು ನನಸಾಗಿಸಲು ನಾವು ಕಾರ್ಯನಿರ್ವಹಿಸುತ್ತಿರುವಾಗ ಜಗತ್ತು ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ ಎಂದು ಅವರು ಹೇಳಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯಂದು ಇಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯ ಕೋಟೆಗೋಡೆಯಿಂದ ‘ವಂದೇ ಮಾತರಂ’ ಮೊಳಗಿದೆ. ಇದು ಭಾರತೀಯರಿಗೆ ಗೌರವದ ವಿಷಯ. ಮಹಾತ್ಮ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದ ಅವರು, ಅವರ ತ್ಯಾಗವನ್ನು ಸ್ಮರಿಸಿದರು.
ಇನ್ನು ಸಣ್ಣ ಕನಸುಗಳು ಸಾಕಾಗುವುದಿಲ್ಲ... ನಾವು ದೊಡ್ಡ ಕನಸು ಕಾಣಬೇಕು. 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ದೊಡ್ಡ ಕನಸು ಭಾರತಕ್ಕಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೊಂದು ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಿದಾಗ, ಜಗತ್ತು ನಮ್ಮನ್ನು ವಿಭಿನ್ನವಾಗಿ ನೋಡಲಿದೆ” ಎಂದು ಪ್ರಧಾನಿ ಹೇಳಿದರು.
ನಮ್ಮ ಕನಸುಗಳು ಮತ್ತು ಸಂಕಲ್ಪಗಳು ದೊಡ್ಡದಾಗಿರಬೇಕು. ಇದರಿಂದ ನಮ್ಮ ಸಾಮರ್ಥ್ಯಗಳು ಮತ್ತಷ್ಟು ಎತ್ತರಕ್ಕೇರುತ್ತವೆ ಎಂದು ಹೇಳಿದರು. 140 ಕೋಟಿ ಭಾರತೀಯರ ಶಕ್ತಿಯಿಂದ ಭಾರತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರಗಳನ್ನು ಮುಟ್ಟುತ್ತಿದೆ ಎಂದರು.
ಪ್ರತಿಯೊಂದು ಹೃದಯವೂ ವಂದೇ ಮಾತರಂ ಎಂಬ ಭಾವನೆಯಿಂದ ಮಿಡಿಯುತ್ತಿದೆ. ಪ್ರತಿಯೊಂದು ಮನೆ ಮತ್ತು ಪ್ರತಿಯೊಂದು ಹೃದಯದಲ್ಲೂ ತ್ರಿವರ್ಣ ಧ್ವಜವಿದೆ. ಹೊಸ ಶಕ್ತಿಯೊಂದಿಗೆ, ಹೊಸ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಗ್ಗೆ ಪ್ರಧಾನಿ ಮೋದಿ ಅವರು ಗೌರವ ವಂದನೆ ಸ್ವೀಕರಿಸಿದ ಬಳಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಸೇನಾ ಬ್ಯಾಂಡ್ ‘ವಂದೇ ಮಾತರಂ’ ಗೀತೆಯ ಧುನಿಯನ್ನು ನುಡಿಸಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ರಾಷ್ಟ್ರಗೀತೆಯನ್ನು ಹಾಡಿದರು.
ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್ಗಳು ಸಮಾರಂಭದ ಸ್ಥಳದ ಮೇಲೆ ಪುಷ್ಪದಳಗಳ ಮಳೆಗರೆದವು. ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು, ಮತ್ತೊಂದು ‘ವಂದೇ ಮಾತರಂ’ ಬಿಂಬಿಸುವ ಧ್ವಜವನ್ನು ಹೊತ್ತೊಯ್ದಿತ್ತು.
‘ವಿಕಸಿತ ಭಾರತ’ದ ಗುರಿಯತ್ತ ಸಾಗುತ್ತಿರುವ ದೇಶದ ಪಯಣದಲ್ಲಿ ಸಮಾಜದ ಎಲ್ಲ ವರ್ಗಗಳ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಕಳೆದ 12 ವರ್ಷಗಳಲ್ಲಿ ದಲಿತರು, ಶೋಷಿತರು, ಬಡವರು, ಮಧ್ಯಮ ವರ್ಗದವರು, ಯುವಕರು ಸೇರಿದಂತೆ ಕೋಟ್ಯಂತರ ಜನರು ದೇಶವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ. ಸಮರ್ಪಣಾ ಮನೋಭಾವದಿಂದ ಪ್ರಯತ್ನಿಸಿದ್ದಾರೆ. ಅವರ ಕೊಡುಗೆಯನ್ನು ನಾನು ಗೌರವಿಸುತ್ತೇನೆ. ಈ ಪ್ರಯತ್ನದ ಫಲವಾಗಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಭಾರತೀಯರೂ ತಮ್ಮದೇ ರೀತಿಯಲ್ಲಿ ಭಾರತವನ್ನು ಮುನ್ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನ ಪ್ರಯತ್ನವನ್ನೂ ನಾನು ಗೌರವಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಹೊಸ, ಧೈರ್ಯಶಾಲಿ ಭಾರತದತ್ತ ಜಗತ್ತು ಗಮನ ಹರಿಸಿದೆ. ದೊಡ್ಡ ಕನಸು ಕಾಣುವ ಮತ್ತು ಅದನ್ನು ಸಾಧಿಸುವ ಧೈರ್ಯವೇ ನವಭಾರತದ ಹೆಗ್ಗುರುತು. ನಮ್ಮ ಪ್ರಯತ್ನಗಳನ್ನು ಗಮನಿಸಬೇಕಾದ ಅನಿವಾರ್ಯತೆ ಜಗತ್ತಿಗೆ ಎದುರಾಗಿದೆ ಎಂದು ಹೇಳಿದರು.
ನಮ್ಮ ಸಂಕಲ್ಪ ದೃಢವಾಗಿರಬೇಕು. ಸಂಕಲ್ಪ ಬಲವಾಗಿದ್ದಾಗ, ಎಲ್ಲ ಸವಾಲುಗಳು ಮತ್ತು ಸಮಸ್ಯೆಗಳ ನಡುವೆಯೂ ಪರಿಹಾರದ ಮಾರ್ಗಗಳನ್ನು ಕಂಡುಕೊಂಡು ನಾವು ವಿಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ ಎಂದು ಪ್ರಧಾನಿ ಹೇಳಿದರು.
ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯ ಪರಿಕಲ್ಪನೆಗೆ ಒತ್ತು ನೀಡಿದ ಪ್ರಧಾನಿ ಮೋದಿ, ಭಾರತ ಇತರರ ಮೇಲೆ ಅವಲಂಬಿತವಾಗಿರಬಾರದು ಎಂದು ಹೇಳಿದರು.
ಭಾರತ ಇತರರ ಮೇಲೆ ಅವಲಂಬಿತವಾಗಿರಬಾರದು ಎಂಬ ದೃಢ ನಂಬಿಕೆ ನಮಗಿದೆ. ನಾವು ಸ್ವಾವಲಂಬಿಗಳಾಗಬೇಕು. ನಮಗೆ ಬೇಕಾದ ಎಲ್ಲವೂ ದೇಶದಲ್ಲೇ ದೊರೆಯುತ್ತದೆ. ಆದ್ದರಿಂದ ನಾವು ನಮ್ಮನ್ನು ಸುಧಾರಿಸಿಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು ಮತ್ತು ಸ್ವದೇಶಿ, ಆತ್ಮನಿರ್ಭರತೆ ಹಾಗೂ ‘ವೋಕಲ್ ಫಾರ್ ಲೋಕಲ್’ ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕಾಗಿ ಕೆಂಪುಕೋಟೆಗೆ ಆಗಮಿಸುವ ಮೊದಲು ರಾಜ್ಘಾಟ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ ಮೊಳಗಿತು.