

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿದ್ಯಾರ್ಥಿ ಅಬ್ದುಲ್ಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಬೆಂಬಲ ವ್ಯಕ್ತಪಡಿಸಿದ್ದು; ಅಬ್ದುಲ್ ಅವರ ತಂದೆಯ ಸಾವಿಗೆ ಕಾರಣರೆಂದು ಆರೋಪಿಸಲಾದ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
'ಎಕ್ಸ್' ನಲ್ಲಿನ ಪೋಸ್ಟ್ನಲ್ಲಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಧ್ವನಿ ಎತ್ತಿದ ನಂತರ ಅಬ್ದುಲ್ ತಾನು ಓದಿದ್ದ ಶಾಲೆಯನ್ನು ಪರಿಶೀಲಿಸಲು ಹೋಗಿದ್ದರು. ಬಿಜೆಪಿ ಜೊತೆ ನಂಟು ಹೊಂದಿದ್ದಾರೆನ್ನಲಾದ ವ್ಯಕ್ತಿಗಳು ಅಬ್ದುಲ್ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಅಬ್ದುಲ್ ಅವರ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ.
'ಉತ್ತಮ ಶಾಲೆಗಳನ್ನು ಒತ್ತಾಯಿಸಿದ್ದಕ್ಕಾಗಿ ಜನರನ್ನು ಕೊಲೆ ಮಾಡುತ್ತಿರುವುದು ನನ್ನ ರಕ್ತ ಕುದಿಯುವಂತೆ ಮಾಡುತ್ತಿದೆ. ನ್ಯಾಯಕ್ಕಾಗಿ ಹೋರಾಡಲು ಸಿಜೆಪಿ (CJP) ತಂಡವೊಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಅಬ್ದುಲ್ ಮತ್ತು ಅವರ ಕುಟುಂಬದೊಂದಿಗೆ ಕೆಲಸ ಮಾಡಲಿದೆ. ಅಲ್ಲದೆ, ಈ ಆರೋಪಿತ ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು' ಎಂದು ದೀಪ್ಕೆ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
'ಸಿಜೆಪಿ ಅಬ್ದುಲ್ ಮತ್ತು ಅವರ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ. ಬೆದರಿಕೆಗಳು ಅಥವಾ ಭಯ ಹುಟ್ಟಿಸುವ ಪ್ರಯತ್ನಗಳ ಹೊರತಾಗಿಯೂ, ಉತ್ತಮ ಸರ್ಕಾರಿ ಶಾಲೆಗಳಿಗಾಗಿನ ತಮ್ಮ ಅಭಿಯಾನವನ್ನು ಸಂಘಟನೆಯು ಮುಂದುವರಿಸಲಿದೆ' ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುವ 'ಸ್ಕೂಲ್ ಥಿಕ್ ಕರೋ' (School Thik Karo) ಅಭಿಯಾನವನ್ನು ಪ್ರಾರಂಭಿಸಿದ ನಂತರ ದೀಪ್ಕೆ ಈ ಹೇಳಿಕೆ ನೀಡಿದ್ದಾರೆ.
ಈ ಅಭಿಯಾನವು ಸರ್ಕಾರಿ ಶಾಲೆಗಳ ಸಾಮಾಜಿಕ ಲೆಕ್ಕಪರಿಶೋಧನೆಗೆ (social audit) ಕರೆ ನೀಡುತ್ತದೆ; ಇದರಲ್ಲಿ ಕುಡಿಯುವ ನೀರು, ವಿದ್ಯುತ್, ಉತ್ತಮ ಶೌಚಾಲಯಗಳು, ಬೆಂಚುಗಳು ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ವಿಷಯಗಳ ಕುರಿತು ದಾಖಲೆಗಳನ್ನು ಸಂಗ್ರಹಿಸಲು ಪೋಷಕರು ಹಾಗೂ ಸ್ಥಳೀಯ ನಿವಾಸಿಗಳನ್ನು ಕೋರಲಾಗಿದೆ.
ಮಹಾರಾಷ್ಟ್ರದಲ್ಲಿರುವ ತಮ್ಮ ಸ್ವಗ್ರಾಮದ ಶಾಲೆಯೊಂದರಲ್ಲಿ ಈ ಹಿಂದೆ ನಡೆಸಿದ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ, ಕುಡಿಯುವ ನೀರಿನ ಕೊರತೆ, ಅಶುಚಿಯಾದ ಶೌಚಾಲಯಗಳು, ಮುರಿದ ಕಿಟಕಿಗಳು ಮತ್ತು ನೀರಿನ ಅಸಮರ್ಪಕ ಪೂರೈಕೆಯಂತಹ ಸಮಸ್ಯೆಗಳನ್ನು ದೀಪ್ಕೆ ಎತ್ತಿ ತೋರಿಸಿದ್ದರು.
ಈ ಅಭಿಯಾನವನ್ನು ದೇಶದಾದ್ಯಂತ ಇರುವ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.