

ಕಲ್ಯಾಣಿ: ದ್ವೇಷ ಭಾಷಣ ಪ್ರಕರಣದಲ್ಲಿ ವಿಚಾರಣೆ ಹಾಜರಾಗುವಂತೆ ನೀಡಿದ ಆದೇಶವನ್ನು ಪಾಲಿಸದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಆದೇಶ ಹೊರಡಿಸಿದೆ.
ಮಹುವಾ ಮೊಯಿತ್ರಾ ವಿರುದ್ಧ ತಕ್ಷಣವೇ ಬಂಧನ ವಾರಂಟ್ ಜಾರಿಗೊಳಿಸುವಂತೆ ಮತ್ತು ಆಗಸ್ಟ್ 28ರೊಳಗೆ ವರದಿ ಸಲ್ಲಿಸುವಂತೆ ಕೃಷ್ಣನಗರ ನ್ಯಾಯಾಲಯದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ಮಹಿಳೆಯರನ್ನು ಅವಮಾನಿಸಿದ್ದಾರೆ ಮತ್ತು ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯವು ಟಿಎಂಸಿ ಸಂಸದೆಗೆ ಸಮನ್ಸ್ ಜಾರಿ ಮಾಡಿತ್ತು.
ಪದೇ ಪದೇ ಸಮನ್ಸ್ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ಗಮನಿಸಿದ ಕೃಷ್ಣನಗರ ನ್ಯಾಯಾಲಯ, ಮೊಯಿತ್ರಾ ವಿರುದ್ಧ ತಕ್ಷಣವೇ ಬಂಧನ ವಾರಂಟ್ ಹೊರಡಿಸುವಂತೆ ಆದೇಶಿಸಿದೆ.
ಮಹುವಾ ಮೊಯಿತ್ರಾ ಅವರಿಗೆ ಬುಧವಾರವೇ ಕೋರ್ಟ್ಗೆ ಹಾಜರಾಗುವಂತೆ ಮಂಗಳವಾರ ಸೂಚನೆ ನೀಡಲಾಗಿತ್ತು. ಆದರೆ ಅವರು ಗೈರುಹಾಜರಾಗಿದ್ದರು. ಸಂಸದೆ ಪರ ವಕೀಲರು, ‘ಕೋರ್ಟ್ ಆವರಣದ ಹೊರಗೆ ತಮ್ಮ ಕಕ್ಷಿದಾರರಿಗೆ ಬೆದರಿಕೆ ಇದೆ, ಹೀಗಾಗಿ ಅವರು ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಸಂಸದೆಯ ಈ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ಅವರ ಉಡಾಫೆಯ ನಡವಳಿಕೆಯನ್ನು ತೋರಿಸುತ್ತದೆ. ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿರುವುದು ಆರೋಪಿಗೆ ಕಾನೂನಿನ ಮೇಲೆ ಗೌರವವಿಲ್ಲದಿರುವುದನ್ನು ತೋರಿಸುತ್ತದೆ. ಹೀಗಾಗಿ ವಾರಂಟ್ ಹೊರಡಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ ಎಂದು ಕೋರ್ಟ್ ಖಾರವಾಗಿ ಹೇಳಿದೆ.