

ಹರಿದ್ವಾರ (ಉತ್ತರಾಖಂಡ): ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನಾನಾ ರೀತಿಯ ವಿಲಕ್ಷಣ ಮತ್ತು ಆಕರ್ಷಕ ವೀಡಿಯೊಗಳು ವೈರಲ್ ಆಗುತ್ತಿರುತ್ತವೆ. ಆದರೆ ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಮಾಡಿರುವ ಸಾಮಾಜಿಕ ಪ್ರಯೋಗದ ವೀಡಿಯೊ ಇಡೀ ಇಂಟರ್ನೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಪವಿತ್ರ ನಗರಿ ಹರಿದ್ವಾರದ ಪ್ರಸಿದ್ಧ ಕಾವಡ್ ಮೇಳದ ಸಂದರ್ಭದಲ್ಲಿ ಈ ಯೂಟ್ಯೂಬರ್ ತನ್ನ ಸ್ನೇಹಿತನಿಗೆ ಭಿಕ್ಷುಕನ ವೇಷ ಧರಿಸಿ ರಸ್ತೆಯಲ್ಲಿ ಕೂರಿಸಿದ್ದರು. ಆತ ಕೇವಲ ಒಂದೇ ದಿನದಲ್ಲಿ ಭಕ್ತರಿಂದ ಭಿಕ್ಷೆ ಬೇಡಿ ಗಳಿಸಿದ ಒಟ್ಟು ಮೊತ್ತವನ್ನು ಕಂಡು ನೆಟ್ಟಿಗರು ಮಾತ್ರವಲ್ಲದೆ ಸ್ವತಃ ಆ ಯೂಟ್ಯೂಬರ್ ತಂಡವೇ ಅಚ್ಚರಿಗೊಂಡಿದೆ. ಭಾರತದಲ್ಲಿ ಭಿಕ್ಷಾಟನೆ ಎಷ್ಟು ದೊಡ್ಡ ಉದ್ಯಮವಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಈ ವಿಲಕ್ಷಣ ಪ್ರಯೋಗವೇ ಸಾಕ್ಷಿಯಾಗಿದೆ.
ಹೌದು, ಪ್ರಸಿದ್ಧ ಯೂಟ್ಯೂಬರ್ ಪುರುಷೋತ್ತಮ್ ವಸಿಷ್ಠ ಮತ್ತು ಅವರ ಸ್ನೇಹಿತ ಸಚಿನ್ ಅವರು, ಹರಿದ್ವಾರದ ಕಾವಡ್ ಮೇಳದಲ್ಲಿ ಭಿಕ್ಷುಕನಂತೆ ನಟಿಸಿದ ಯೂಟ್ಯೂಬರ್ ಸ್ನೇಹಿತ ಕೇವಲ 8 ಗಂಟೆಗಳಲ್ಲಿ ಒಟ್ಟು 4,000 ರೂಪಾಯಿ ಗಳಿಸಿದ್ದಾನೆ. ಭಾರತದ ಪ್ರಮುಖ ಧಾರ್ಮಿಕ ಸಭೆಗಳಲ್ಲಿ ಭಿಕ್ಷೆ ಬೇಡುವವರು ದಿನಕ್ಕೆ ಎಷ್ಟು ಸಂಪಾದಿಸಬಹುದು ಎಂಬುದನ್ನು ಕಂಡುಹಿಡಿಯುವು ಉದ್ದೇಶದೊಂದಿಗೆ, ಸಚಿನ್ ಹರಿದ ಹಳೇ ಬಟ್ಟೆ ಧರಿಸಿ, ಮುಖಕ್ಕೆ ಮಸಿ ಬಳಿದು, ಕೈಯಲ್ಲಿ ಒಂದು ಪಾತ್ರೆ ಹಿಡಿದು ಸಂಪೂರ್ಣವಾಗಿ ಭಿಕ್ಷುಕನಂತೆ ವೇಷ ಧರಿಸಿದ್ದನು. ವಿಶೇಷವೆಂದರೆ, ಸಚಿನ್ ತನ್ನ ಕುತ್ತಿಗೆಗೆ ಹಣ ಪಾವತಿಸಲು ಯುಪಿಐ ಕ್ಯೂಆರ್ ಕೋಡ್ (UPI QR Code) ಅನ್ನು ಕೂಡ ನೇತುಹಾಕಿಕೊಂಡಿದ್ದನು.
ಮುಂದುವರೆದು, ಮೊದಲ ಕೆಲವು ಗಂಟೆಗಳಲ್ಲಿ ಗಳಿಕೆ ತುಂಬಾ ಕಡಿಮೆಯಾಗಿತ್ತು (ಸುಮಾರು 130 ರೂ.). ಆನ್ಲೈನ್ ಕ್ಯೂಆರ್ ಕೋಡ್ ಮೂಲಕ ಕೇವಲ 40 ರೂಪಾಯಿ ಬಂದಿತ್ತು. ಆದರೆ, ಭಿಕ್ಷೆ ಬೇಡುವ ಜಾಗಗಳನ್ನು ಬದಲಾಯಿಸಿದಂತೆ, 4 ಗಂಟೆಗಳು ಮುಗಿಯುವಷ್ಟರಲ್ಲಿ 800 ರೂಪಾಯಿ ಸಂಗ್ರಹವಾಗಿತ್ತು. ಆದರೆ, ದಿನದ ಕೊನೆಯಲ್ಲಿ ಅಂದರೆ 8 ಗಂಟೆಗಳ ಅಂತ್ಯದ ವೇಳೆಗೆ ಅವರು ಒಟ್ಟು ಗಳಿಕೆಯನ್ನು ಎಣಿಸಿದಾಗ 4,000 ರೂಪಾಯಿ ಜಮೆಯಾಗಿತ್ತು. ಈ ಗಳಿಕೆಯನ್ನು ಆಧರಿಸಿ ಲೆಕ್ಕ ಹಾಕಿದ ಯೂಟ್ಯೂಬರ್, ದಿನಕ್ಕೆ 4,000 ರೂ. ಗಳಿಸಿದರೆ ಒಬ್ಬ ವ್ಯಕ್ತಿ ತಿಂಗಳಿಗೆ 1.2 ಲಕ್ಷ ರೂಪಾಯಿ ಸಂಪಾದಿಸಬಹುದು ಎಂದು ಹೇಳಿದರು.
ಏತನ್ಮಧ್ಯೆ, ಹಣದ ಆಕರ್ಷಣೆ ದೊಡ್ಡದಾಗಿ ಕಂಡರೂ, ಭಿಕ್ಷೆ ಬೇಡುವುದು ಅತ್ಯಂತ ಕಷ್ಟದ ಕೆಲಸ ಎಂದು ಯೂಟ್ಯೂಬರ್ ಪುರುಷೋತ್ತಮ್ ವಸಿಷ್ಠ ಒಪ್ಪಿಕೊಂಡಿದ್ದಾರೆ. ಜನರು ಇವರನ್ನು ಬೈದಿದ್ದರು, ಕೆಟ್ಟದಾಗಿ ನಡೆಸಿಕೊಂಡಿದ್ದರು ಮತ್ತು ಭದ್ರತಾ ಸಿಬ್ಬಂದಿ ಅಲ್ಲಿಂದ ಓಡಿಸಿದ್ದರು. ಆದರೆ, ಭಿಕ್ಷೆ ಬೇಡುವುದು ಗೌರವಾನ್ವಿತ ಕೆಲಸವಲ್ಲ, ಯುವಕರು ಇಂತಹ ಕೆಲಸಗಳಿಗೆ ಮಾರುಹೋಗದೆ ಪ್ರಾಮಾಣಿಕವಾಗಿ ದುಡಿದು ಬದುಕಬೇಕು ಎಂದು ಯೂಟ್ಯೂಬರ್ಸ್ ವೀಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.