ಹುಡುಗರು ನಿಂದಿಸಿದರೆ ಸಮಸ್ಯೆಯಿಲ್ಲವೇ? ಹುಡುಗಿಯರು ಬಳಸಿದರೆ ಮಾತ್ರ 'ಸಾಂಸ್ಕೃತಿಕ ಆಘಾತ'ವೇ?; ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಬಗೆಯ ಹಿಂಸಾಚಾರಗಳ ಕುರಿತು ಮಾತನಾಡಿದರು.
Rahul Gandhi flags violence against women at 'Chhatron Ki Goonj' in Pune
'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ
Updated on

ಪುಣೆಯ ಎಸ್‌ಎಸ್‌ಪಿಎಂಎಸ್ (SSPMS) ಮೈದಾನದಲ್ಲಿ ನಡೆದ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದಲ್ಲಿ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಹುಡುಗರೂ ಕೂಡ ನಿಂದನೆಯಲ್ಲಿ ತೊಡಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಕೇವಲ ಹುಡುಗಿಯರನ್ನು ಮಾತ್ರ ಗುರಿಯಾಗಿಸಿದರು. ಮಹಿಳೆಯರನ್ನು ಪಂಜರದೊಳಗೆ ಬಂಧಿಸಿಡಲು ಬಯಸುವ ಮನಸ್ಥಿತಿಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೊಂದಿವೆ ಎಂದು ಶನಿವಾರ ಹೇಳಿದರು. ದೇಶದಲ್ಲಿ ಅವರು ಹಮ್ಮಿಕೊಂಡಿದ್ದ ನಾಲ್ಕನೇ ಕಾರ್ಯಕ್ರಮ ಇದಾಗಿತ್ತು.

ಹೆಚ್ಚಾಗಿ ರಾಜಕೀಯೇತರವಾಗಿದ್ದ ಸಂವಾದವೊಂದರ ವೇಳೆ ಗಾಂಧಿ, 'ಜಂತರ್ ಮಂತರ್‌ನಲ್ಲಿ ಹುಡುಗರು ಮತ್ತು ಹುಡುಗಿಯರಿಬ್ಬರೂ ನಿಂದನಾತ್ಮಕ ಭಾಷೆಯನ್ನು ಬಳಸಿದರು. ಆದರೆ, ಹುಡುಗಿಯರು ನಿಂದನಾತ್ಮಕ ಭಾಷೆ ಬಳಸಿದ್ದನ್ನು ಕಂಡು ತಮಗೆ 'ಸಾಂಸ್ಕೃತಿಕ ಆಘಾತ'ವಾಯಿತು ಎಂದು ಪ್ರಧಾನಿ ಹೇಳಿದರು. ಹುಡುಗರು ನಿಂದನಾತ್ಮಕ ಭಾಷೆ ಬಳಸಿದರೆ ಸಮಸ್ಯೆಯಿಲ್ಲವೇ? ಅವರಿಗೆ ಅದಕ್ಕೆ ಅನುಮತಿಯಿದೆಯೇ?' ಎಂದರು.

ದೆಹಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ನಂತರ ಬಿಡುಗಡೆಯಾದ ವಿಡಿಯೋವೊಂದರ ಬಗ್ಗೆ ಅವರು ಪ್ರಸ್ತಾಪಿಸುತ್ತಿದ್ದರು; ಅದರಲ್ಲಿ ಪ್ರಧಾನಿ ಮೋದಿ, ಮಹಿಳೆಯರು ತಮ್ಮ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದು ಭಾರತಕ್ಕೆ ಒಂದು 'ಸಾಂಸ್ಕೃತಿಕ ಆಘಾತ' ಎಂದು ಹೇಳಿದ್ದರು ಮತ್ತು ಆ ಅವಮಾನಗಳನ್ನು ತಾವು 'ಕ್ಷಮಿಸಿರುವುದಾಗಿ' ತಿಳಿಸಿದ್ದರು.

ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಬಗೆಯ ಹಿಂಸಾಚಾರಗಳ ಕುರಿತು ಮಾತನಾಡಿದರು. 'ಯುವತಿಯಾಗಿರುವಾಗ ತಂದೆಯ ಅಧೀನದಲ್ಲಿಯೂ, ಮದುವೆಯಾದ ನಂತರ ಪತಿಯ ಅಧೀನದಲ್ಲಿಯೂ ಮತ್ತು ತರುವಾಯ ಮಗನ ಅಧೀನದಲ್ಲಿಯೂ ಮಹಿಳೆ ಇರಬೇಕು' ಎಂದು ಹೇಳುವ ಮನುಸ್ಮೃತಿಯ ಉಲ್ಲೇಖದೊಂದಿಗೆ ಅವರು ತಮ್ಮ ಭಾಷಣ ಪ್ರಾರಂಭಿಸಿದರು.

Rahul Gandhi flags violence against women at 'Chhatron Ki Goonj' in Pune
'ಮೋದಿ ಜೀ, ನಿಮ್ಮ ಪರೀಕ್ಷಾ ಸಂಸ್ಥೆ ಏನು ಮಾಡಿದೆ ನೋಡಿ': UGC-NET ಮರುಪರೀಕ್ಷೆ ಘೋಷಣೆ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ

'ಮಗಳಾಗಿ, ಪತ್ನಿಯಾಗಿ ಅಥವಾ ತಾಯಿಯಾಗಿರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಇದಷ್ಟೇ ನಿಮ್ಮ ಏಕೈಕ ಗುರುತಾಗಬಾರದು. ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಮಹಿಳೆಯರಿಗೆ ಅವರ ಹಕ್ಕುಗಳು ಮತ್ತು ಸವಲತ್ತುಗಳನ್ನು ನಿರಾಕರಿಸಲಾಗಿದೆ. ಮಹಿಳೆಯರು ಸ್ವತಂತ್ರವಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ; ಆದರೆ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡಲೇಬೇಕು, ಏಕೆಂದರೆ ಅವರಲ್ಲಿ ಅಪಾರ ಶಕ್ತಿಯಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳಬೇಕು. ಒಬ್ಬ ಮಹಿಳೆಗೆ ತಂದೆ, ಸಹೋದರ, ಪತಿ ಅಥವಾ ಮಗನೊಂದಿಗಿನ ಸಂಬಂಧಗಳಿರಬಹುದು. ಆದರೆ, ಅವಳು ಅವರ ಆಸ್ತಿಯಲ್ಲ — ಅವಳು ತನಗೆ ತಾನೇ ಸೇರಿರುವವಳು' ಎಂದು ಅವರು ಹೇಳಿದರು.

'ಬಿಜೆಪಿ ಮತ್ತು ಆರ್‌ಎಸ್ಎಸ್ ಮಹಿಳೆಯರು ಹಾಗೂ ಬಾಲಕಿಯರು ಪಂಜರಗಳಲ್ಲಿ ಬಂಧಿಯಾಗಿರಬೇಕು ಎಂಬ ಮನಸ್ಥಿತಿಯನ್ನು ಹೊಂದಿವೆ. ಆದರೆ ನಮಗೆ ಅಂತಹ ಭಾರತ ಬೇಕಾಗಿಲ್ಲ. ಎಲ್ಲರನ್ನೂ ಗೌರವದಿಂದ ಕಾಣುವ ವ್ಯವಸ್ಥೆಯನ್ನು ನಾವು ಬಯಸುತ್ತೇವೆ. ಮಹಿಳೆಯರನ್ನು ದಮನಿಸುವ ಮನಸ್ಥಿತಿಯು ಮನುಸ್ಮೃತಿಯಿಂದ ಬಂದಿದೆ ಮತ್ತು ಇಂದು ನಮ್ಮ ಹೋರಾಟವು ಇದೇ ಮನಸ್ಥಿತಿಯ ವಿರುದ್ಧವಾಗಿದೆ' ಎಂದು ಗಾಂಧಿ ಹೇಳಿದರು.

ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗಾಣಿಸಬೇಕು

ಈ ಅವಧಿಯಲ್ಲಿ, ಹಲವು ಮಹಿಳೆಯರು ಮುಖ್ಯವಾಗಿ ಕಾಲೇಜು ವಿದ್ಯಾರ್ಥಿನಿಯರು ವೇದಿಕೆಯನ್ನೇರಿ, ತಾವು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಾಂಧಿಯವರೊಂದಿಗೆ ಮಾತನಾಡಿದರು. ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾದ ಹಲವು ಸ್ಲೈಡ್‌ಗಳ ಮೂಲಕ, ಮಹಿಳೆಯರು ಎದುರಿಸುವ ಹಿಂಸೆಯ ಪರಿಣಾಮಗಳು, ಅವರಿಗೆ ಆಗುವ ಅವಮಾನ ಮತ್ತು ಸಮಯವನ್ನೇ ಅವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಬಗೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದರು.

ಭಾರತದಲ್ಲಿ ಪ್ರತಿವರ್ಷ 4.5 ಲಕ್ಷ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತವೆ. ಶೇ 80 ರಷ್ಟು ಮಹಿಳೆಯರು ಪ್ರತಿದಿನ ಕಿರುಕುಳ ಎದುರಿಸುತ್ತಾರೆ. ಶೇ 29ರಷ್ಟು ಮಹಿಳೆಯರು ದೈಹಿಕ ಹಿಂಸೆಗೆ ಒಳಗಾಗುತ್ತಾರೆ ಮತ್ತು ಶೇ 6ರಷ್ಟು ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ತಿಳಿಸಿದರು.

Rahul Gandhi flags violence against women at 'Chhatron Ki Goonj' in Pune
ಪ್ರಯಾಗ್‌ರಾಜ್‌ನಲ್ಲಿ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮ ನಡೆಸಲು ರಾಹುಲ್ ಗಾಂಧಿಗೆ ಕೊನೆಗೂ ಅನುಮತಿ

'ನಂತರ, ಅವಕಾಶಗಳನ್ನು ನಿರಾಕರಿಸುವ ಮೂಲಕ ಎಸಗಲಾಗುವ ಹಿಂಸೆಯ ವಿಷಯವಿದೆ. ಸುರಕ್ಷತೆಯ ನೆಪದಲ್ಲಿ, ಶೇ 50ರಷ್ಟು ಮಹಿಳೆಯರಿಗೆ ಶಿಕ್ಷಣ ಅಥವಾ ಉದ್ಯೋಗಾವಕಾಶಗಳನ್ನು ನಿರಾಕರಿಸಲಾಗುತ್ತದೆ. ಆರ್ಥಿಕ ಹಿಂಸೆಯೂ ಇದೆ; ಸುರಕ್ಷಿತ ಪ್ರಯಾಣಕ್ಕಾಗಿ ವಾರ್ಷಿಕವಾಗಿ ಹೆಚ್ಚುವರಿಯಾಗಿ ₹17,500 ವೆಚ್ಚ ಮಾಡಬೇಕಾಗುತ್ತದೆ. ದೇಶದಲ್ಲಿ ಮಹಿಳೆಯರು ವಿವಿಧ ರೀತಿಯ ನಿಯಂತ್ರಣಗಳಿಗೆ ಒಳಪಡುತ್ತಾರೆ' ಎಂದರು.

ಸಮಯವನ್ನು ಹೇಗೆ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದರ ಕುರಿತು ಮಾತನಾಡಿದ ಗಾಂಧಿ, 'ಪುರುಷರು ಕೇವಲ 30 ನಿಮಿಷ ಮನೆಯ ಕೆಲಸ ಮಾಡಿದರೆ, ಮಹಿಳೆಯರು 5.5 ಗಂಟೆ ಮನೆಯ ಕೆಲಸ ಮಾಡುತ್ತಾರೆ. ಮಹಿಳೆಯರು ಮನೆಗೆ ಮರಳಲು ನಿರ್ದಿಷ್ಟ ಸಮಯದ ಮಿತಿಗಳನ್ನು (ಕರ್ಫ್ಯೂ) ಪಾಲಿಸಬೇಕಾಗುತ್ತದೆ ಮತ್ತು ವಿವಾಹಕ್ಕೆ ವಯಸ್ಸಿನ ಮಿತಿಯನ್ನು ವಿಧಿಸಲಾಗಿರುತ್ತದೆ, ಇದು ಅವರ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ನಾವೆಲ್ಲರೂ ಸೇರಿ ಈ ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗಾಣಿಸಬೇಕು. ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಬೇಕು' ಎಂದು ಗಾಂಧಿ ಹೇಳಿದರು.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (MPCC) ನೀಡಿದ ಹೇಳಿಕೆಯಲ್ಲಿ, ಈ ಕಾರ್ಯಕ್ರಮವು ಯಶಸ್ವಿಯಾಗದಂತೆ ತಡೆಯಲು ಬಿಜೆಪಿ ಹಲವು ಬಾರಿ ಅಡ್ಡಿಪಡಿಸಲು ಪ್ರಯತ್ನಿಸಿತು ಎಂದು ತಿಳಿಸಿದೆ. 'ಯುವತಿಯರು ಭಾಗವಹಿಸದಂತೆ ತಡೆಯಲು ಬೆದರಿಕೆಗಳು, ಹಿಂಸಾತ್ಮಕ ಘಟನೆಗಳು ಮತ್ತು ಕಾರ್ಯಕ್ರಮದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳ ನಡುವೆಯೂ, 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಹುಲ್ ಗಾಂಧಿ ಅವರನ್ನು ಕಂಡು ಬಿಜೆಪಿ ಭಯಭೀತಗೊಂಡಿರುವುದರಿಂದ ಅವರ ಕಾರ್ಯಕ್ರಮಕ್ಕೆ ಅಡೆತಡೆಗಳನ್ನು ಸೃಷ್ಟಿಸಿತು; ಆದರೆ ಬಿಜೆಪಿಯ ತಂತ್ರಗಳನ್ನು ಮೀರಿ ನಿಂತು, ಈ ಕಾರ್ಯಕ್ರಮ ಭಾರಿ ಯಶಸ್ಸು ಕಂಡಿತು'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com