ನಾಲ್ಕು ಗೋಡೆಗಳ ನಡುವೆ ನಡೆದ ಜಗಳ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನಾಲ್ಕು ಗೋಡೆಗಳ ನಡುವೆ ನಡೆದ ಜಗಳ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆಯಾ? ಸಾರ್ವಜನಿಕರ ಕಣ್ಣಿಗೆ ಕಾಣದಂತೆ ನಡೆದ ನಿಂದನೆಗೆ ಜಾತಿ ದೌರ್ಜನ್ಯ ಕಾಯ್ದೆ ಅನ್ವಯಿಸುತ್ತದೆಯಾ? ಈ ಗೊಂದಲಗಳಿಗೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Supreme Court
ಸುಪ್ರೀಂ ಕೋರ್ಟ್Online Desk
Updated on

ನವದೆಹಲಿ: ಸ್ವಾತಂತ್ರ್ಯ ಬಂದು 80 ವರ್ಷವಾದರೂ ಸಹ ದೇಶದಲ್ಲಿ ಜಾತಿ ಆಧಾರಿತ ನಿಂದನೆಗಳು ಸಾಮಾನ್ಯವಾಗಿದೆ. ನಮ್ಮ ದೇಶದಲ್ಲಿ ಜಾತಿ ನಿಂದನೆಗೆ ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರಿಗೆ ಜಾತಿ ನಿಂದನೆಯಾದರೆ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ. ಆದರೆ, ಕೆಲವೊಮ್ಮೆ ಈ ಕಾಯಿದೆ ಮಿಸ್ ಯೂಸ್ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತದೆ. ಇದರ ನಡುವೆಯೇ, ದೇಶದ ಸರ್ವೋಚ್ಚ ನ್ಯಾಯಾಲಯವು, ನಾಲ್ಕು ಗೋಡೆಗಳ ಮಧ್ಯೆ ಅಥವಾ ಖಾಸಗಿ ಸ್ಥಳದಲ್ಲಿ ನಡೆಸುವ ಜಾತಿ ನಿಂದನೆಯು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ ಪ್ರಕರಣ ದಾಖಲಾಗಲು ನಡೆದ ಘಟನೆಯನ್ನು ಸಾರ್ವಜನಿಕರು ನೋಡಿರಬೇಕು ಅಥವಾ ಕೇಳಿಸಿಕೊಂಡಿರಬೇಕು. ಅದರಂತೆ, ನಾಲ್ಕು ಗೋಡೆಗಳ ಮಧ್ಯೆ ಅಥವಾ ಸಾರ್ವಜನಿಕರ ಪ್ರವೇಶವಿಲ್ಲದ ಖಾಸಗಿ ಜಾಗದಲ್ಲಿ ಜಾತಿ ನಿಂದನೆ ನಡೆದರೆ, ಅಲ್ಲಿ ಸಾರ್ವಜನಿಕ ಸಾಕ್ಷಿಗಳು ಇಲ್ಲದ ಕಾರಣ ಈ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅದರಲ್ಲೂ, ಒಬ್ಬ ವ್ಯಕ್ತಿಯು ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ, ಅವನನ್ನು ಅವಮಾನಿಸುವ ಉದ್ದೇಶದಿಂದಲೇ ಜಾತಿ ನಿಂದನೆ ಮಾಡಿದ್ದರೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಕೇವಲ ವೈಯಕ್ತಿಕ ಗಲಾಟೆಯಲ್ಲಿ ಬೈದಾಡಿಕೊಂಡರೆ ಈ ಕಾಯ್ದೆ ತರಲು ಬರುವುದಿಲ್ಲ ಎಂದು ತಿಳಿಸಿದೆ.

Supreme Court
ಸಿಜೆಐ ಸೂರ್ಯಕಾಂತ್ ಐತಿಹಾಸಿಕ ತೀರ್ಪು: 105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್

ತೀರ್ಪಿಗೆ ಕಾರಣವಾದ ಪ್ರಕರಣವೇನು?

ಜನವರಿ 24, 2020 ರಂದು, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ಮಗ ಗಾಯಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆಯೊಬ್ಬರು ಶಾಲೆಯ ಮ್ಯಾನೇಜರ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಮ್ಯಾನೇಜರ್ ಹಾಗೂ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಇದರ ಆಧಾರದಲ್ಲಿ ಹಲ್ಲೆ ಹಾಗೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಆದರೆ, ಈ ಪ್ರಕರಣವನ್ನು ರದ್ದು ಮಾಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ, ಸುಪ್ರೀಂ ಕೋರ್ಟ್ ಪ್ರಕರಣದ ತನಿಖಾ ವರದಿಯನ್ನು ಪರಿಶೀಲಿಸಿತು. ಘಟನೆ ನಡೆದಾಗ ಆ ಮುಚ್ಚಿದ ಕೋಣೆಯೊಳಗೆ ಯಾವುದೇ ಸಾರ್ವಜನಿಕರು ಇರಲಿಲ್ಲ ಮತ್ತು ಹೊರಗಿದ್ದ ಯಾರಿಗೂ ಆ ಮಾತುಗಳು ಕೇಳಿಸಿಲ್ಲ ಎಂಬುದು ಸಾಬೀತಾಯಿತು. ಹಾಗಾಗಿ, ಸಾರ್ವಜನಿಕ ನೋಟದ ನಿಯಮ ಇಲ್ಲಿ ಉಲ್ಲಂಘನೆಯಾಗಿರುವುದರಿಂದ, ಆರೋಪಿ ಮೇಲಿದ್ದ ಎಸ್‌ಸಿ/ಎಸ್‌ಟಿ ಕಾಯ್ದೆಯ ದೂರುಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.

Supreme Court
ಚಿಪ್ಸ್ ತಿನ್ನೋ ಮುನ್ನ ಎಚ್ಚರ; ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶ!

ಮುಂದುವರೆದು, ಖಾಸಗಿ ಜಾಗದಲ್ಲಿ ಜಾತಿ ನಿಂದನೆ ಮಾಡಿದರೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ ಅಷ್ಟೇ. ಆದರೆ ಖಾಸಗಿ ಜಾಗದಲ್ಲಿ ಗಲಾಟೆ ಮಾಡಿ, ನಿಂದಿಸಿ, ಹಲ್ಲೆ ನಡೆಸಿದ್ದರೆ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಾಮಾನ್ಯ ಕ್ರಿಮಿನಲ್ ಪ್ರಕರಣಗಳು ಮುಂದುವರಿಯುತ್ತವೆ ಮತ್ತು ಶಿಕ್ಷೆಯೂ ಆಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com