

ಛತ್ತರ್ಪುರ: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಒಂಬತ್ತು ತಿಂಗಳ ಹೆಣ್ಣು ಮಗು ಸೇರಿದಂತೆ ಮೂವರು ಅಪ್ರಾಪ್ತ ಸಹೋದರಿಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪೋರಾ ಖುರ್ದ್ ಗ್ರಾಮದಿಂದ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಮೃತರನ್ನು ಬಲ್ಮುಕುಂದ್ ಕುಶ್ವಾಹ ಅವರ ಹೆಣ್ಣುಮಕ್ಕಳಾದ ಏಳು ವರ್ಷದ ಪೂನಂ, ಮೂರು ವರ್ಷದ ಮನೀಷಾ ಮತ್ತು ಒಂಬತ್ತು ತಿಂಗಳ ಚಾಹತ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಮೂವರು ಹುಡುಗಿಯರು ಸಾವಿಗೆ ಮುನ್ನ ನಿನ್ನೆ ರಾತ್ರಿ ಬದನೆಕಾಯಿ ಭರ್ತಾ ಮತ್ತು ರೊಟ್ಟಿ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಆಹಾರವೇ ಅವರ ಸಾವಿಗೆ ಕಾರಣವೇ ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಪೊಲೀಸರಿಗೆ ತಿಳಿಸದೆ ಅಥವಾ ಮರಣೋತ್ತರ ಪರೀಕ್ಷೆ ನಡೆಸದೇ ಕುಟುಂಬವು ಮೂವರ ಶವಗಳನ್ನು ಹೂಳಿದೆ ಎಂದು ಅಧಿಕಾರಿಗಳಿಗೆ ತಿಳಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ನಂತರ ಸ್ಥಳೀಯ ಪೊಲೀಸರು, ವೈದ್ಯರೊಂದಿಗೆ ಗ್ರಾಮಕ್ಕೆ ತೆರಳಿ ಸಮಾಧಿ ಸ್ಥಳವನ್ನು ಪರಿಶೀಲಿಸಿದರು.
ಛತ್ತರ್ಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆರ್ಪಿ ಗುಪ್ತಾ ಅವರು ಈ ಬಗ್ಗೆ ಐಎಎನ್ಎಸ್ಗೆ ಮಾಹಿತಿ ನೀಡಿದ್ದು, "ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ, ನಾನು ನನ್ನ ಸಂಪೂರ್ಣ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದೆ. ಪೊಲೀಸ್, ಕಂದಾಯ ಮತ್ತು ಎಫ್ಎಸ್ಎಲ್ ತಂಡಗಳಿಗೂ ಮಾಹಿತಿ ನೀಡಿ ಕರೆಸಲಾಯಿತು" ಎಂದು ಹೇಳಿದ್ದಾರೆ.
ಸಾವಿಗೆ ಕಾರಣವಾದ ಸಂದರ್ಭಗಳನ್ನು ತಿಳಿಯಲು ಮತ್ತು ನಿಖರವಾದ ಕಾರಣವನ್ನು ನಿರ್ಧರಿಸಲು ತಂಡಗಳು ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
"ನಾವು ಎಲ್ಲಾ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯಲಾಗಿದೆ. ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳು ಸಾವಿನ ನಿಜವಾದ ಕಾರಣವನ್ನು ತಿಳಿಯಲು ಸಹಾಯ ಮಾಡುತ್ತವೆ" ಎಂದು ಗುಪ್ತಾ ಹೇಳಿದ್ದಾರೆ.
ಮೂವರ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಊಟದಲ್ಲಿ ಬದನೆಕಾಯಿ ಭರ್ತಾ ಸೇವಿಸಿದ ನಂತರ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳನ್ನು ಸ್ವೀಕರಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.